ಕೊಕ್ರಾಣಿ: ಮೂರು ಮನೆಗಳಿಗೆ ನೀರಿಲ್ಲ; ಪಂಚಾಯಿತಿ ಎದುರು ಸ್ಥಳೀಯರ ಧರಣಿ
ಪಡುಬಿದ್ರಿ, ಫೆ. 8: ಕೊಕ್ರಾಣಿ ಪರಿಸರದ ಮೂರು ಮನೆಗಲಿಗೆ ಕೆಲವು ದಿನಗಳಿಂದ ನೀರು ಪೂರೈಕೆ ಮಾಡದಿರುವುದನ್ನು ವಿರೋಧಿಸಿ ಹೆಜಮಾಡಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಸ್ಥಳೀಯರು ಗ್ರಾಮಸ್ಥರು ಖಾಲಿ ಕೊಡಪಾನ ಪ್ರದರ್ಶಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೊಕ್ರಾಣಿ ಮಟ್ಟುವಿನ ಸ್ಟ್ಯಾನಿ ಫೆರ್ನಾಂಡಿಸ್, ಜೇಮ್ಸ್ ಫೆರ್ನಾಂಡಿಸ್ ಮತ್ತು ಧನಂಜಯ ಎಂಬವರ ಮನೆಗಳಿಗೆ ಕುಡಿಯುವ ನೀರು ಹರಿದು ಬರುವ ಹೆಜಮಾಡಿ ಪಂಚಾಯತ್ನ ಪೈಪ್ಲೈನ್ನಲ್ಲಿ ತೊಂದರೆಯಿದೆ. ಅದನ್ನು ನಿರ್ವಹಿಸಿ ಕುಡಿಯುವ ನೀರು ಬರುವಂತೆ ಮಾಡಿ ಎಂದು ಹಲವಾರು ಬಾರಿ ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಮಾತನಾಡಿ ಪೈಪ್ ಲೈನ್ ಕಾಮಗಾರಿಯನ್ನು ಹೊಸ ಪ್ರಸ್ತಾವನೆಯೊಂದಿಗೆ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಅನುಮೋದನೆಯನ್ನು ಪಡೆದು ಮಾಡಬೇಕಿದೆ. ಆದರೆ ನಾಳೆಯಿಂದಲೇ ಮುಂಗಡವಾಗಿ ಗುತ್ತಿಗೆದಾರರಿಂದ ಈ ಕಾಮಗಾರಿಯನ್ನು ನಡೆಸಿ ಅತೀ ಶೀಘ್ರದಲ್ಲೇ ಆ ಮೂರು ಮನೆಗಳಿಗೆ ನೀರು ಸರಬರಾಜಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅಡಚಣೆಗಳುಂಟಾದರೂ ಕುಡಿಯುವ ನೀರು ಪೂರೈಕೆಗಾದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.