ಮಲ್ಪೆ: ವಂದೇ ಮಾತರಂ ಹಾಡಿಗೆ ರಾಗ ಸಂಯೋಜನೆಯಲ್ಲಿ ವಿಶ್ವದಾಖಲೆ
ಮಲ್ಪೆ, ಫೆ.9: ಸಂವೇದನಾ ಫೌಂಡೇಶನ್ ವತಿಯಿಂದ ಮಲ್ಪೆ ಕಡಲ ತೀರದಲ್ಲಿ ಆಯೋಜಿಸಲಾದರಾಷ್ಟ್ರಮಟ್ಟದ ವಂದೇ ಮಾತರಂ ಗೀತ ಗಾಯನ ಆಲ್ಬಮ್ ಗಳ ಸ್ಪರ್ಧೆಯಲ್ಲಿ ರಾಷ್ಟ್ರೀಯ ಹಾಡಿಗೆ 183 ಬಗೆಯ ರಾಗಗಳನ್ನು ಸಂಯೋ ಜನೆ ಮಾಡುವುದರೊಂದಿಗೆ ಈ ಕಾರ್ಯಕ್ರಮವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಬಂಧಕ ಮನೀಶ್ ಬಿಶ್ನೋಯಿ ಇದನ್ನು ಸಭೆಯಲ್ಲಿ ಘೋಷಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ಈ ಸ್ಪರ್ಧೆಯಲ್ಲಿ 16 ರಾಜ್ಯಗಳಿಂದ 183 ಸ್ಪರ್ಧಿಗಳು ಭಾಗವಹಿಸಿದ್ದು, ಅಂತಿಮವಾಗಿ ಆಯ್ಕೆಯಾದ 12 ಗೀತೆಗಳನ್ನು ವೇದಿಕೆಯಲ್ಲಿ ಕಲಾವಿದರು ಹಾಡಿದರು. ಪುತ್ತೂರು ಜಗದೀಶ್ ಪ್ರಥಮ 2 ಲಕ್ಷ ರೂ. ನಗದು ಬಹುಮಾನ ಮತ್ತು ಫಲಕ, ವಿನಯ್ ಕಿರಣ್ ಶಿವಾನಿ ಕೊಪ್ಪ ದ್ವಿತೀಯ 1 ಲಕ್ಷ ರೂ. ನಗದು ಬಹುಮಾನ, ಸೌಮ್ಯ ಭಟ್ ಕಟೀಲ್ ಉತ್ತಮ ಸಿನೆಮಾ ಫೋಟೋಗ್ರಾಫಿ, ಮಾನಸ ಕೇರಳ ಬೆಸ್ಟ್ ಟ್ಯೂನ್, ಶಿವಾನಿ ಕೊಪ್ಪ ಅತೀ ಹೆಚ್ಚು ಯೂಟ್ಯೂಬ್ ವೀಕ್ಷಣೆಗೆ ತಲಾ 10 ಸಾವಿರ ರೂ. ಬಹುಮಾನ ಪಡೆದರು.
ಸಂವೇದನಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉದ್ಯಮಿ ಕಿಶೋರ್ ಕುಮಾರ್ ಪುತ್ತೂರು, ಸದಾನಂದ ಸಾಲ್ಯಾನ್, ಸದಾಶಿವ ಸ್ವದೇಶಿ ಮೊದಲಾದವರು ಉಪಸ್ಥಿತರಿದ್ದರು.