ಧರ್ಮಸ್ಥಳ: ಮೋಕ್ಷ ಸಾಧನೆಗಾಗಿ ಕ್ಷುಲ್ಲಕ ದೀಕ್ಷಾ ಮಹೋತ್ಸವ
ಬೆಳ್ತಂಗಡಿ, ಫೆ. 10: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ರವಿವಾರ ರತ್ನಗಿರಿಯಲ್ಲಿ ಬಾಹುಬಲಿಯ ಪದತಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದರೆ, ಇತ್ತ ಅಮೃತವರ್ಷಿಣಿ ಸಭಾ ಭವನದಲ್ಲಿ ಮೋಕ್ಷ ಸಾಧನೆಗಾಗಿ ಕ್ಷುಲ್ಲಕ ದೀಕ್ಷಾ ಮಹೋತ್ಸವ ನಡೆಯಿತು.
ಆಚಾರ್ಯ ಶ್ರೀ 108 ವರ್ಧಮಾನ ಸಾಗರ್ಜಿ ಮುನಿಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಹಾಗೂ ಮುನಿ ಸಂಘದವರು ಮತ್ತು ಮಾತಾಜಿಯವರ ನೇತೃತ್ವದಲ್ಲಿ ಐದು ಮಂದಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮಹೋತ್ಸವ ನಡೆಯಿತು.
ಮಧ್ಯಪ್ರದೇಶದ 24 ವರ್ಷ ಪ್ರಾಯದ ಸತೀಶ್ ಬೈಯ್ಯಾಜಿ, ಹೈದ್ರಾಬಾದ್ನ ಪೂರನ್ ಬೈಯ್ಯಾಜಿ, ಉತ್ತರ ಪ್ರದೇಶದ ಶ್ರೀ ಪ್ರಭು ಬೈಯ್ಯಾಜಿ, ಸಂಯಮ ಮತ್ತು ಸವಿತಾಕ್ಷುಲ್ಲಕ ದೀಕ್ಷೆ ಪಡೆದರು.
ಬೆಳಿಗ್ಗೆ ಭಗವಾನ್ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಬಳಿಕ ದೀಕ್ಷೆ ಪಡೆಯುವ ಐದು ಮಂದಿಯನ್ನು ಹಾಗೂ ಮುನಿ ಸಂಘದವರನ್ನು ಭವ್ಯ ಮೆರವಣಿಗೆಯಲ್ಲಿ ಅಮೃತ ವರ್ಷಿಣಿ ಸಭಾ ಭವನಕ್ಕೆ ಕರೆತರಲಾಯಿತು.
ದೀಕ್ಷೆ ಪಡೆಯುವವರನ್ನು ಉತ್ತಮ ವಸ್ತ್ರಾಭರಣ ತೊಡಿಸಿ ಸಿಂಗರಿಸಲಾಗಿತ್ತು. ಧರ್ಮಸ್ಥಳದ ಅನಿತಾ ಸುರೇಂದ್ರಕುಮಾರ್ ಅಕ್ಕಿಯಿಂದ ಸ್ವಸ್ತಿಕವನ್ನು ರಚಿಸಿದರು. ದೀಕ್ಷಾರ್ಥಿಗಳನ್ನು ಮುನಿಗಳು ಯಾಕೆ ದೀಕ್ಷೆ ಪಡೆಯುವುದು ಎಂದು ಪ್ರಶ್ನಿಸಿದರು. ಎಲ್ಲರೂ ಆತ್ಮಕಲ್ಯಾಣಕ್ಕಾಗಿ ಹಾಗೂ ಮೋಕ್ಷಪ್ರಾಪ್ತಿಗಾಗಿ ದೀಕ್ಷೆ ಪಡೆಯುವುದಾಗಿ ತಮ್ಮ ಅಭಿಪ್ರಾಯ ತಿಳಿಸಿದರು. ಅವರ ಮಾತಾ-ಪಿತರಲ್ಲಿಯೂ ಒಪ್ಪಿಗೆ ಪಡೆದ ಬಳಿಕ ದೀಕ್ಷಾ ಕಾರ್ಯಕ್ರಮ ನಡೆಯಿತು.
ದೀಕ್ಷಾರ್ಥಿಗಳ ಎಲ್ಲಾ ಆಭರಣಗಳನ್ನು ಒಂದೊಂದಾಗಿ ಕಳಚಲಾಯಿತು. ಅಂಗಿ ಮತ್ತು ಬಟ್ಟೆಯನ್ನೂ ಕಳಚಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕೇಶಲೋಚನ ಮಾಡಲಾಯಿತು. ತಲೆಯ ಕೂದಲನ್ನು ಮುನಿಗಳು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ.
ಸಂಯಮ ಮತ್ತು ಸವಿತಾಗೆ ಬಿಳಿ ಸೀರೆ ಉಡಿಸಿದರು. ಪಂಚ ನಮಸ್ಕಾರ ಮಂತ್ರ ಪಠಣ ಹಾಗೂ ಶ್ಲೋಕಗಳ ಪಠಣದೊಂದಿಗೆ ಮುನಿ ಸಂಘದವರು ಕ್ಷುಲ್ಲಕ ದೀಕ್ಷೆ ನೀಡಿದರು. ಐದು ಮಂದಿಗೂ ಪಿಂಛಿ ಮತ್ತು ಕಮಂಡಲ ಹಾಗೂ ಸ್ವಾಧ್ಯಾಯಕ್ಕಾಗಿ ಶಾಸ್ತ್ರ ಗ್ರಂಥಗಳನ್ನು ನೀಡಲಾಯಿತು.
ದೀಕ್ಷೆಯಿಂದ ಆತ್ಮಕಲ್ಯಾಣ, ಮೋಕ್ಷ ಪ್ರಾಪ್ತಿ: ಸುಖ-ಭೋಗಗಳನ್ನು ತ್ಯಾಗ ಮಾಡಿ ವೈರಾಗ್ಯ ಭಾವನೆಯಿಂದಯೋಗ ಸಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆತ್ಮನೇ ಪರಮಾತ್ಮನಾಗಬಲ್ಲ ಎಂದುಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೆಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.