‘ಅರ್ಥಧಾರಿಯ ಒಳಗು’ ಕೃತಿಯ ಬಿಡುಗಡೆ ಸಮಾರಂಭ
ಉಡುಪಿ, ಫೆ.11: ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್, ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಸಹಯೋಗದಲ್ಲಿ ಲೇಖಕ ಡಾ.ಕೆ.ಎಂ.ರಾಘವ ನಂಬಿ ಯಾರ್ ಅವರ ‘ಅರ್ಥಧಾರಿಯ ಒಳಗು’ ಕೃತಿಯ ಬಿಡುಗಡೆ ಸಮಾರಂಭವು ರವಿವಾರ ಕಲಾಕ್ಷೇತ್ರದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಜರಗಿತು.
ಕೃತಿಯನ್ನು ಬಿಡುಗಡೆಗೊಳಿಸಿದ ಅರ್ಥಧಾರಿ ಸಾಂತೂರು ಸದಾಶಿವ ರಾವ್ ಮಾತನಾಡಿ, ಹಿಂದಿನ ಕಾಲದ ಕಲಾವಿದರು ಯಕ್ಷಗಾನವನ್ನು ಆತ್ಮ ತೃಪ್ತಿಗಾಗಿ ಬಳಸಿಕೊಂಡಿದ್ದರು. ಆದರೆ ಇಂದು ಸಮಾಜದಲ್ಲಿ ವಿಕೃತ ಮನಸ್ಸುಗಳು ಹೆಚ್ಚಾಗಿವೆ. ನಾವು ನಮ್ಮವರು ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ವಹಿಸಿದ್ದರು. ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ. ಹಿರಿಯಡಕ ಮುರಳೀಧರ ಉಪಾಧ್ಯಾಯ, ಕಲಾಕ್ಷೇತ್ರದ ಅಧ್ಯಕ್ಷ ಯು. ಗೋಪಾಲಕೃಷ್ಣ ಮಲ್ಯ, ಲೇಖಕ ಕಬ್ಬಿನಾಲೆ ವಂಸತ ಭಾರದ್ವಾಜ್, ಲೇಖಕ ಡಾ.ರಾಘವ ನಂಬಿಯಾರ್ ಉಪಸ್ಥಿತರಿದ್ದರು.
ಯಕ್ಷ ರಂಗ ಕಟೀಲು ಸಿತ್ಲ ಫೌಂಡೇಶನ್ ಸ್ಥಾಪಕ ಕಾರ್ಯದರ್ಶಿ ಕಟೀಲು ಸಿತ್ಲ ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು. ನಾಗರತ್ನಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಕಲಾಕ್ಷೇತ್ರ ಸಂಸ್ಥೆಯ ಸದಸ್ಯರಿಂದ ಯಕ್ಷಗಾನ ತಾಳೆ ಮದ್ದಳೆ ಕಾರ್ಯಕ್ರಮ ನಡೆಯಿತು.