ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ವಾರ್ಷಿಕೋತ್ಸವ
ಮಂಗಳೂರು, ಫೆ.14:ಸಮಾಜದಲ್ಲಿ ಬಂಟ ಮಹಿಳೆಯರೂ ಮುಂದೆ ಬರಬೇಕು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿರುವ ಬಂಟರ ಸಂಘವು ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳಲು ವಿದ್ಯಾರ್ಥಿನಿ ಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಸಿನಿಮಾ ನಿರ್ದೇಶಕ, ನಟ ರಿಷಬ್ ಶೆಟ್ಟಿ ನುಡಿದರು.
ನಗರದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈ, ಡಾ.ಮಿಶ್ರ ಹೆಗ್ಡೆ, ಸಂಚಾಲಕ ಉಷಾ ಎಚ್. ಬಳ್ಳಾಲ್, ಕಾರ್ಯದರ್ಶಿ ಶಾರಿಕಾ ಭಂಡಾರಿ, ಜಯಲಕ್ಷ್ಮಿ ಶೆಟ್ಟಿ, ಸುನಿಲಾ ಪ್ರಭಾಕರ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಸಂಸ್ಥೆಯ ವಾರ್ಡನ್ ಜಯಂತಿ ಎಸ್. ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಸಂಗೀತಾ, ಹರ್ಷಿತಾ, ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು. ಸಹ ವಾರ್ಡನ್ ಕಾಮಿನಿ ಶೆಟ್ಟಿ ವಂದಿಸಿದರು.
ಆಟೋಟ ಸ್ಪರ್ಧೆ: ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾದ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮಿತಿಯ ನೂತನ ಸಲಹೆಗಾರರಾದ ಆಶಾಜ್ಯೋತಿ ರೈ, ವೀಣಾ ಟಿ.ಶೆಟ್ಟಿ, ಸವಿತಾ ಚೌಟ ಉದ್ಘಾಟಿಸಿದರು.