ಸೈನಿಕರ ಹತ್ಯೆಗೆ ಖಂಡನೆ: ಪುತ್ತೂರಿನಲ್ಲಿ ವಿಎಚ್ಪಿ-ಬಜರಂಗದಳ ಪ್ರತಿಭಟನೆ
ಪುತ್ತೂರು, ಫೆ.15: ಭಯೋತ್ಪಾದನೆಯ ಮೂಲಕ ಭಾರತದ ಸ್ವಾಭಿಮಾನವನ್ನು ಕೆಡಿಸಲು ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿರುವ ಭಯೋತ್ಪಾದನೆಯನ್ನು ಸರ್ವನಾಶ ಮಾಡಿದಾಗ ಮಾತ್ರ ಭಾರತದ ಹುತಾತ್ಮ ಸೈನಿಕರಿಗೆ ನೈಜ ಶ್ರದ್ಧಾಂಜಲಿ ಸಲ್ಲುತ್ತದೆ ಎಂದು ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ವತಿಯಿಂದ ಪುತ್ತೂರಿನ ಗಾಂಧಿ ಕಟ್ಟೆಯ ಬಳಿಯಲ್ಲಿ ಅವೊಂತಿಪೋರಾದಲ್ಲಿ ನಡೆದ ಭಾರತದ ಸೈನಿಕರ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವಿಎಚ್ಪಿ ಜಿಲ್ಲಾಧ್ಯಕ್ಷ ಡಾ.ಪ್ರಸನ್ನ ಮಾತನಾಡಿ, ಪಾಕಿಸ್ತಾನ ಕುಮ್ಮಕ್ಕಿನಿಂದ ನಡೆದ ಭಯೋತ್ಪಾದನಾ ಕೃತ್ಯ ಖಂಡನೀಯ. ಕೇಂದ್ರ ಸರ್ಕಾರ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರಗಾಮಿಗಳಿಗೆ ತಕ್ಕ ಉತ್ತರ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನಿವೃತ್ತ ಸೈನಿಕ ಸುರೇಶ್ ಶೆಣೈ ಮಾತನಾಡಿದರು. ಸಭೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಶ್ವಹಿಂದೂ ಪರಿಷತ್ ಬಜರಂಗದಳ ಮುಖಂಡರಾದ ಜನಾರ್ದನ ಬೆಟ್ಟ, ಸತೀಶ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.