ಸವಣೂರು: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ವತಿಯಿಂದ 17ನೇ ರಕ್ತದಾನ ಶಿಬಿರ
ಪುತ್ತೂರು, ಫೆ. 15: ರಕ್ತದಾನಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ. ಜಾತಿ ಧರ್ಮಗಳ ಹಂಗಿಲ್ಲದೆ ನಡೆಯುವ ಇಂತಹ ಶಿಬಿರಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ರಕ್ತದಾನ ಮಾಡಬೇಕು. ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ ಆತನಿಗೆ ಒಂದು ಜೀವವನ್ನು ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ರೈ ಹೇಳಿದರು.
ಅವರು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ಸವಣೂರು ಯೂತ್ ಫ್ರೆಂಡ್ಸ್ ಇದರ ಸಂಯುಕ್ತ ಆಶ್ರಯದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಸಹಯೋಗದೊಂದಿಗೆ ಗುರುವಾರ ಪುತ್ತೂರು ತಾಲೂಕಿನ ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಲಡ್ ಹೆಲ್ಪ್ ಕೇರ್ ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಠಾಣೆಯ ಪ್ರೊಬೇಷನರಿ ಎಸ್ಸೈ ಶ್ರೀಧರ್ ರಾವ್, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ, ಪುದುಬೆಟ್ಟು ಜಿನಮಂದಿರದ ಮೊಕ್ತೇಸರ ಶತ್ರುಂಜಯ ಆರಿಗ, ಸವಣೂರು ಯೂತ್ ಫ್ರೆಂಡ್ಸ್ ಸಂಚಾಲಕ ಹೈದರ್ ಅಲಿ ಐವತ್ತೊಕ್ಲು, ರೋಟರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ರಾಮಚಂದ್ರ ಭಟ್, ಸವಣೂರು ಯೂತ್ ಫ್ರೆಂಡ್ಸ್ ಗೌರವಾಧ್ಯಕ್ಷ ರಫೀಕ್ ಟಾಸ್ಕೋ ಭಾಗವಹಿಸಿದ್ದರು.
ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಎಂ.ಎ, ಪಣೆಮಜಲು ರಹ್ಮಾನಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್ ಪಣೆಮಜಲು, ಸವಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ, ಬೆಳ್ಳಾರೆ ಪೊಲೀಸ್ ಠಾಣೆ ಸಿಬ್ಬಂದಿ ಬಾಲಕೃಷ್ಣ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸವಣೂರು ಯೂತ್ ಫ್ರೆಂಡ್ಸ್ ಅಧ್ಯಕ್ಷ ಸಫ್ವಾನ್ ಸವಣೂರು ಸ್ವಾಗತಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು ಐವತ್ತು ಮಂದಿ ದಾನಿಗಳು ರಕ್ತದಾನ ಮಾಡಿದರು.