ಮಂಗಳೂರು: ಸಿದ್ಧಗಂಗಾಶ್ರೀಗೆ ಭಾರತರತ್ನ ನೀಡಲು ಒತ್ತಾಯ
ಮಂಗಳೂರು, ಫೆ.15: ಧಾರ್ಮಿಕ ಸಂತ ನಿರ್ಗತಿಕ ಮಕ್ಕಳ ಆಶಾಕಿರಣ ಸಿದ್ಧಗಂಗಾಶ್ರೀಗಳಿಗೆ ಭಾರತರತ್ನವನ್ನು ಕೇಂದ್ರ ಸರಕಾರ ಹಾಗೂ ದಿ.ಹಾಜ್ ಅಲ್ ಹಾಜಿ ಜಬ್ಬಾರ್ ಉಸ್ತಾದ್ ಅವರಿಗೆ ಶಾಂತಿ ಗೌರವ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಕಚೇರಿಯಲ್ಲಿ ಮುಸ್ಲಿಂ ಲೀಗ್ನಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮರುಹುಂ ಸಿ. ಅಬ್ದುಲ್ ಹಮೀದ್ ಅವರ 24ನೇ ಅನುಸ್ಮರಣಾ ಸಭೆಯಲ್ಲಿ ಮಾತನಾಡಿದ ಅವರು, ಹಮೀದ್ ಅವರು ಸರಳ ಸತ್ಯವಂತ ರಾಜಕಾರಣಿಯಾಗಿದ್ದರು. ಹಮೀದ್ ನಿಧನ ಹೊಂದಿ 24 ವರ್ಷಗಳು ಕಳೆದರೂ ಅವರ ಸೇವೆಯನ್ನು ಜ್ಞಾಪಿಸುವುದು ಶ್ಲಾಘನೀಯ ಎಂದರು.
ಮುಸ್ಲಿಂ ಸೆಂಟರ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಮುಹಮ್ಮದ್ ಮಸೂದ್, ನ್ಯಾಯವಾದಿ ಹಾಜಿ ಎಸ್.ಸುಲೈಮಾನ್, ಸಿದ್ದೀಕ್ ತಲಪಾಡಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿಲಾಲ್ ಮಿಹಿದ್ದೀನ್, ನಗರ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ಅಹ್ಮದ್ ಬಾವ ಬಜಾಲ್, ಇಮ್ತಿಯಾಝ್ ಎ.ಆರ್. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬೆಂಗರೆ ವಲಯ ಮುಸ್ಲಿಂ ಲೀಗ್ ಸಂಚಾಲಕ ಶರೀಫ್ ಆಯೋಜಿಸಿದರು. ಮಾಜಿ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್ ವಂದಿಸಿದರು.