ಮಂಗಳೂರು ನಾಗರಿಕರಿಂದ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ
ಮಂಗಳೂರು, ಫೆ.15: ಕದ್ರಿ ಉದ್ಯಾನವನದ ಬಳಿ ಇರುವ ಯೋಧರ ಸ್ಮಾರಕದಲ್ಲಿ ಪುಲ್ವಾಮದಲ್ಲಿ ಹುತಾತ್ಮರರಾದ ಯೋಧರಿಗೆ ಮಂಗಳೂರು ನಗರದ ವಿವಿಧ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕಾಶ್ಮೀರದಲ್ಲಿ ಸೈನಿಕರು ದಾಳಿಗೆ ಯಾವೂದೇ ಸಿದ್ಧತೆಯಲ್ಲಿ ಇಲ್ಲದೆ ಇದ್ದಾಗ ಏಕಾಏಕಿ ದಾಳಿ ನಡೆದಿದೆ. ಯೋಧರ ಸಾವು ಎಲ್ಲರಿಗೂ ದುಖವನ್ನುಂಟು ಮಾಡುವ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮಾತ್ರವಲ್ಲ ನಾಡಿನಾದ್ಯಂತ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಿರುವುದನ್ನು ಕಂಡಾಗ ಜನರ ದೇಶ ಪ್ರೇಮದ ಬಗ್ಗೆ ಅಭಿಮಾನ ಉಂಟಾಗುತ್ತದೆ ಎಂದು ಸಂತಾಪ ಸೂಚಿಸಿದರು.
ಕ್ಯಾಪ್ಟನ್ ಗಣೇಶ್ ಕಾರ್ನೀಕ್ ಮಾತನಾಡಿ ನಂತರ ಸಂತಾಪ ಸೂಚಿಸಿದರು.
ಯೋಧರ ಸ್ಮಾರಕದ ಬಳಿ ಮೊಂಬತ್ತಿ ಉರಿಸಿ, ಪುಷ್ಪನಮನದೊಂದಿಗೆ ಹುತಾತ್ಮರಾದ ಯೋಧರಿಗೆ ಮನಪಾ ಮೇಯರ್ ಭಾಸ್ಕರ ಕೆ, ಮಾಜಿ ಮೇಯರ್ ಶಶಿಧರ ಹೆಗ್ಡ, ಮನಪಾ ಸದಸ್ಯರಾದ ನವೀನ್ ಡಿ ಸೋಜ, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಮಾಜಿ ಸೈನಿಕರ ಸಂಘಟನೆಯ ಮುಖಂಡರಾದ ಬ್ರಿಗೇಡಿಯರ್ ಐ.ಎನ್.ರೈ, ವಿಕ್ರಂ ದತ್ತ್, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಬಿಜೆಪಿ ಮುಖಂಡ ಬ್ರಿಜೇಶ್ ಚೌಟ, ಪ್ರಾಂಕ್ಲಿನ್ ಮೊಂತೆರೋ, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಸಂತಾಪ ಸೂಚಿಸಿದರು.
ವಿವಿಧ ಸಂಘಟನೆಗಳ ಸದಸ್ಯರು,ಮಾಜಿ ಸೈನಿಕರು, ಪೊಲೀಸರು ಹಾಗೂ ಮಂಗಳೂರು ನಾಗರಿಕರು ಸಂತಾಪ ಸೂಚಿಸಿದರು.