ಮೂಳೂರು : ಬಾರಿಗೆ ಪರವಾನಿಗೆ; ನಾಗರಿಕ ಸಮಿತಿ ವಿರೋಧ
ಕಾಪು, ಫೆ. 15: ರಾಷ್ಟ್ರೀಯ ಹೆದ್ದಾರಿ 66 ಮೂಳೂರು ಬಸ್ ನಿಲ್ದಾಣದ ಬಳಿಯ ಜುಮ್ಮಾ ಮಸೀದಿಯ ಮುಖ್ಯ ದ್ವಾರದ ಮುಂಬಾಗದಲ್ಲಿ ನಿರ್ಮಾಣಗೊಳ್ಳುತ್ತಿ ರುವ ಬಾರ್ ಅಂಗಡಿ ತೆರೆಯಲು ಪರವಾನಿಗೆ ನೀಡಿರುವ ಕ್ರಮವನ್ನು ವಿರೋಧಿಸಿ ಹಾಗೂ ನೀಡಿರುವ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮೂಳೂರು ನಾಗರಿಕ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನಾ ಸಭೆ ನಡೆಯಿತು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿ, ಮೂಳೂರು ಪರಿಸರದಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸೌಹಾರ್ದತೆಯಿಂದ ಬಾಳ್ವೆಯನ್ನು ನಡೆಸುತ್ತಿದ್ದಾರೆ. ಅದರೊಂದಿಗೆ ಧಾರ್ಮಿಕ ಕೇಂದ್ರಗಳು, ಸಿ.ಎಸ್.ಐ ಚರ್ಚ್, ಯು.ಬಿಎಂ.ಸಿ ಪ್ರಾಥಮಿಕ ಶಾಲೆ ಹಾಗೂ ಸಿ.ಎಸ್.ಐ ಪ್ರೌಢಶಾಲೆಯು ಇಲ್ಲಿ ಕಾರ್ಯಾಚರಿಸುತ್ತಿದ್ದು, ಎರಡು ಸಾವಿರ ವಿದ್ಯಾರ್ಥಿಗಳನ್ನೊಳಗೊಂಡ ಅಲ್-ಇಹ್ಸಾನ್ ಶೈಕ್ಷಣಿಕ ಸಂಸ್ಥೆಯು ಇದೇ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದು, ಬಾರ್ ಪ್ರಾರಂಭಗೊಂಡರೆ ಇಲ್ಲಿನ ಜನಜೀವನಕ್ಕೆ ತೊಂದರೆಯುಂಟಾಗುವ ಸಾಧ್ಯತೆಗಳಿವೆ ಎಂದರು.
ಮೂಳೂರು ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಹಾಜಿ, ಮಾಜಿ ಅಧ್ಯಕ್ಷ ಎಂ.ಎಚ್.ಬಿ ಮೊಹಮ್ಮದ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ನ ಮ್ಯಾನೇಜರ್ ಮುಸ್ತಫಾ ಸಅದಿ, ಜೆ.ಡಿ.ಎಸ್ ಮುಖಂಡ ಮನ್ಸೂರ್ ಇಬ್ರಾಹಿಂ, ಎಸ್.ಡಿ.ಪಿ.ಐ ಮುಖಂಡ ಹನೀಫ್ ಮೂಳೂರು, ಕಾಪು ಪುರಸಭಾ ಸದಸ್ಯರಾದ ಅಬ್ದುಲ್ ಹಮೀದ್, ಸಂಜೀವಿ ಪೆಂಗಾಲ್, ಮೂಳೂರು ನಾಗರಿಕ ಸಮಿತಿಯ ಅಧ್ಯಕ್ಷ ಅನ್ವರ್ ಹಸನ್, ಎಂ.ಎ. ಬಾವು, ಸಲಾಂ ವೈ.ಬಿ.ಸಿ., ಹರ್ಷ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.