ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಶಿಕ್ಷಕರಿಂದ ಧರಣಿ
ಉಡುಪಿ, ಫೆ.16: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಧರಣಿ ನಡೆಸಲಾಯಿತು.
ಪ್ರಸಕ್ತ ವರ್ಷದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಅನಿವಾರ್ಯ ಕಾರಣಗಳಿಂದ ಕಳೆದ ಮೂರು ತಿಂಗಳುಗಳಿಂದ ನಡೆದಿಲ್ಲ. ಆದುದರಿಂದ ಮೂರು ವರ್ಷದ ವರ್ಗಾವಣೆ ಶೇಕಡಾ ಮಿತಿಯನ್ನು ಪರಿಗಣಿಸಿ ಪ್ರಸಕ್ತ ವರ್ಷದ ವರ್ಗಾವಣೆ ಪ್ರಕ್ರಿಯೆಗಳನ್ನು ಜೂನ್ ತಿಂಗಳಿಗೆ ಜಾರಿಗೆ ಬರುವಂತೆ ಪೂರ್ಣಗೊಳಿಸಬೇಕು ಎಂದು ಧಣಿನಿರತ ಶಿಕ್ಷಕರು ಒತ್ತಾಯಿಸಿದರು.
ಭಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಂಡಿರುವುದರಿಂದ ಸೇವಾ ನಿರತ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಕನಿಷ್ಠ ಷರತ್ತುಬದ್ಧ ಭಡ್ತಿಗಳನ್ನು ನೀಡಬೇಕು. ನೂತನ ಪಿಂಚಣಿ ಯೋಜನೆಯನ್ನು ತಕ್ಷಣ ರದ್ದುಗೊಳಿಸಬೇಕು. ಮುಖ್ಯ ಶಿಕ್ಷಕ ರಿಗೆ ಹಾಗೂ ಭಡ್ತಿ ಹೊಂದುವವರಿಗೆ ಅವರ ಸೇವಾ ಜೇಷ್ಠತೆಯ ಆಧಾರದ ಮೇಲೆ 10, 15, 20, 25, 30 ವರ್ಗಳ ಆರ್ಥಿಕ ಸೌಲಭ್ಯ ನೀಡಬೇಕು.
ಗ್ರಾಮೀಣ ಕ್ರಪಾಂಕ ಸೌಲಭ್ಯ ಪಡೆದುಕೊಂಡು ಸೇವೆಯಿಂದ ವಜಾ ಆಗಿರುವ ಶಿಕ್ಷಕರ ಪೂರ್ಣ ಸೇವೆಯನ್ನು ಪರಿಗಣಿಸಿ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಶಿಕ್ಷಕರನ್ನು ಬಿ.ಎಲ್.ಒ ಮತ್ತು ಇನ್ನಿತರ ಶಿಕ್ಷಣೇತರ ಕಾರ್ಯ ಗಳಿಂದ ಮುಕ್ತಗೊಳಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತಿ್ರಗಳಿಗೆ ಸಲ್ಲಿಸಲಾಯಿತು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಬಿ.ಬಿ.ಪ್ರಕಾಶ್, ಕುಂದಾ ಪುರ ಶಾಖೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಬೈಂದೂರು ಶಾಖೆಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬ್ರಹ್ಮಾವರ ಶಾಖಾಧ್ಯಕ್ಷ ದಿನಕರ ಶೆಟ್ಟಿ, ಉಡುಪಿ ಶಾಖೆಯ ಅಧ್ಯಕ್ಷೆ ಮಂಗಳ ಶೆಟ್ಟಿ, ಕಾರ್ಕಳ ಶಾಖಾ ಅಧ್ಯಕ್ಷ ಕೃಷ್ಣ ಮೊಯಿಲಿ, ಎನ್ಪಿಎಸ್ನ ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಧರಣಿಯ ಆರಂಭದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ದೇಶದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.