ಉಡುಪಿ: ಎರಡು ಮಂಗಗಳ ಕಳೇಬರ ಪತ್ತೆ
ಉಡುಪಿ, ಫೆ.16: ಉಡುಪಿ ಜಿಲ್ಲೆಯ ಕುಕ್ಕುಂಜೆ ದೊಂಡರಂಗಡಿ ಹಾಗೂ ಬೈಂದೂರು ಸಮೀಪದ ತೆಗ್ಗರ್ಸೆಯಲ್ಲಿ ಎರಡು ಮಂಗಗಳ ಕಳೇಬರ ಇಂದು ಪತ್ತೆಯಾಗಿದೆ.
ಇದರಲ್ಲಿ ದೊಂಡರಂಗಡಿಯ ಮಂಗವನ್ನು ಅಟಾಪ್ಸಿ ನಡೆಸಲಾಗಿದ್ದು, ತಗ್ಗರ್ಸೆಯಲ್ಲಿ ಮಂಗ ಕೊಳೆತ ಸ್ಥಿತಿಯಲ್ಲಿದ್ದುದರಿಂದ ಅಟಾಪ್ಸಿ ನಡೆಸಿಲ್ಲ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಶಂಕಿತ ಮಂಗನ ಕಾಯಿಲೆ ಪೀಡಿತರೊಬ್ಬರ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 39 ಮಾನವರ ಪೈಕಿ 35 ಮಂದಿಯ ವರದಿಯಲ್ಲಿ ಯಾವುದೇ ವೈರಸ್ ಕಂಡುಬಂದಿಲ್ಲ. ಇನ್ನು 4 ವರದಿ ಬಾಕಿ ಇದೆ. ಜಿಲ್ಲೆಯಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಜಾಗೃತಿ ಕಾರ್ಯಕ್ರಮ, ಜ್ವರದ ಪರೀಕ್ಷೆ, ಮುಂಜಾಗ್ರತಾ ಕ್ರಮಗಳು ಹಾಗೂ ಮಂಗಗಳ ಸಾವುಗಳ ಹುಡುಕಾಟ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಇಂದು ಜಿಲ್ಲೆಯ 86 ಗ್ರಾಮಗಳ 3304 ಮನೆಗಳಿಗೆ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸಲಾಯಿತು. ಈವರೆಗೆ ಜಿಲ್ಲೆಯ 85ಸಾವಿರ ಮನೆಗಳಿಗೆ ಭೇಟಿ ನೀಡಿ ಶಂಕಿತ ಮಂಗನ ಕಾಯಿಲೆ ಪೀಡಿತರಿಗಾಗಿ ಪರಿಶೀಲನೆ ನಡೆಸಲಾ ಯಿತು ಎಂದು ಅವರು ತಿಳಿಸಿದರು.