ಕರ್ಣಾಟಕ ಬ್ಯಾಂಕ್ಗೆ ‘ಇಟಿ ನೌ-ಬಿಎಫ್ಎಸ್ಐ’ ಅವಳಿ ಪ್ರಶಸ್ತಿ
ಮಂಗಳೂರು, ಫೆ.16: ‘ಇಟಿ ನೌ’ ಸುದ್ದಿವಾಹಿನಿ-ವರ್ಲ್ಡ್ ಬಿಎಫ್ಎಸ್ಐ ಕಾಂಗ್ರೆಸ್ ವತಿಯಿಂದ ನೀಡುವ ‘ಶ್ರೇಷ್ಠ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಆಚರಣೆ ಹಾಗೂ ‘ಅತ್ಯುತ್ತಮ ತಂತ್ರಜ್ಞಾನ ದೃಷ್ಟಿಕೋನದ ಬ್ಯಾಂಕ್’ ಪುರಸ್ಕಾರಗಳನ್ನು ಕರ್ಣಾಟಕ ಬ್ಯಾಂಕ್ ಪಾತ್ರವಾಗಿದೆ.
ಮುಂಬೈನಲ್ಲಿ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭವೊಂದರಲ್ಲಿ ಕರ್ಣಾಟಕ ಬ್ಯಾಂಕ್ನಆಡಳಿತ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಪ್ರಶಸ್ತಿಯನ್ನು ಸ್ವೀಕರಿಸಿದರು. ಅತ್ಯುತ್ತಮ ತಂತ್ರಜ್ಞಾನ ದೃಷ್ಟಿಕೋನದ ಬ್ಯಾಂಕ್(ಬ್ಯಾಂಕ್ ವಿದ್ ಬೆಸ್ಟ್ ಟೆಕ್ನಾಲಜಿಕಲ್ ಓರಿಯಂಟೇಶನ್) ಪ್ರಶಸ್ತಿಯನ್ನು ಪಡೆಯುವ ಮೂಲಕ ಕರ್ಣಾಟಕ ಬ್ಯಾಂಕ್ ಗ್ರಾಹಕರಿಗೆ ಡಿಜಿಟಲ್ ತಂತ್ರಜ್ಞಾನದ ಅತ್ಯಾಧುನಿಕ ಬೆಳವಣಿಗೆಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದಕ್ಕೆ ನಿದರ್ಶನವಾಗಿದೆ. ‘ಅತ್ಯುತ್ತಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಆಚರಣೆ’ (ಬೆಸ್ಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಪ್ರಾಕ್ಟೀಸಸ್) ಪ್ರಶಸ್ತಿ ದೊರೆತಿರುವುದು, ಸಮಾಜದ ಅವಕಾಶ ವಂಚಿತ ವರ್ಗಗಳ ಜೀವನಮಟ್ಟವನ್ನು ಸುಧಾರಿಸುವಲ್ಲಿ ಬ್ಯಾಂಕ್ನ ಕೊಡುಗೆಗೆ ನೀಡಿದ ಮಾನ್ಯತೆಯಾಗಿದೆ ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿ ಗಳಿಸುವ ಮೂಲಕ ಬ್ಯಾಂಕಿಂಗ್ ಸೇವೆಯಲ್ಲಿನ ಗುಣಮಟ್ಟವನ್ನು ಸುಧಾರಿಸುವ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆಯೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.