ಕೆಥೊಲಿಕ್ ಸಭಾದಿಂದ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ
ಉಡುಪಿ, ಫೆ.17: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿ ಯಲ್ಲಿ ಹುತಾತ್ಮರಾದ ಯೋಧರಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಉಡುಪಿ ಶೋಕಮಾತಾ ಚರ್ಚಿನ ಆವರಣದಲ್ಲಿ ರವಿವಾರ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಹುತಾತ್ಮ ಯೋಧರಿಗೆ ನುಡಿ ನಮನ ಸಲ್ಲಿಸಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೆಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಉಗ್ರರ ಅಟ್ಟಹಾಸದಲ್ಲಿ ನಾವು ನಮ್ಮ ಪ್ರೀತಿಯ ಯೋಧರನ್ನು ಕಳೆದುಕೊಂಡಿದ್ದು ಅವರ ವೀರ ಬಲಿದಾನವನ್ನು ಸದಾ ನೆನಪಿಟ್ಟುಕೊಳ್ಳುವುದರೊಂದಿಗೆ ದೇಶದ ಐಕ್ಯತೆ ಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ. ನಮ್ಮೆಲ್ಲರ ರಕ್ಷಣೆಗಾಗಿ ನಮ್ಮ ವೀರಯೋಧರು ಇಂದು ತಮ್ಮ ಜೀವದ ಬಲಿದಾನ ಮಾಡಿದ್ದಾರೆ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ ಅರ್ಥರ್ ರೊಡ್ರಿಗಸ್ ಮಾತ ನಾಡಿ, ದೇಶ ಕಾಯುವ ಉನ್ನತ ಕೆಲಸ ಮಾಡುತ್ತಿರುವ ಯೋಧರು ಇಂದು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ನಾವು ಎಂದಿಗೂ ಕೂಡ ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಕೇಂದ್ರ ಸರಕಾರ ಉಗ್ರರ ದಮನಕ್ಕೆ ಕ್ರಮಕೈಗೊಳ್ಳಬೇಕು ಎಂದರು.
ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ರೋಯ್ಸನ್ ಫೆರ್ನಾಂಡಿಸ್, ಉಡುಪಿ ವಲಯ ಕೆಥೊಲಿಕ್ ಸಭಾದ ಅಧ್ಯಕ್ಷೆ ಮೇರಿ ಡಿಸೋಜ, ಇಗರ್ಜಿಯ ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜ, ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಡಿಯೋನ್ ಡಿಸೋಜ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ಮ್ಯಾಕ್ಷಿಮ್ ಡಿಸೋಜ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಅಲ್ಫೋನ್ಸ್ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.