ಉಗ್ರರ ದಾಳಿ ವಿರುದ್ಧ ಮುಸ್ಲಿಮ್ ಒಕ್ಕೂಟದಿಂದ ಖಂಡನಾ ಸಭೆ
ಉಡುಪಿ, ಫೆ.18: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಯೋಧರ ವೀರ ಮರಣದ ವಿಚಾರವನ್ನು ಮುಂದಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ರಾಜಕೀಯ ಮಾಡುವುದು ಸರಿಯಲ್ಲ. ಭಯಾನಕ ಕೃತ್ಯದ ಬಗ್ಗೆ ಕೇಂದ್ರ ಸರಕಾರ ಜನತೆಗೆ ಉತ್ತರ ನೀಡಬೇಕು ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಹೇಳಿದ್ದಾರೆ.
ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ವಿರುದ್ಧ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಘಟಕ ವತಿಯಿಂದ ಸೋಮವಾರ ಅಜ್ಜರಕಾಡು ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾದ ಖಂಡನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಮಲ್ಪೆಯ ಸೈಯದಿನ ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿಯ ಇಮಾಮ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿ, ನಮ್ಮ ಸೈನಿಕರು ವಿಮಾನಯಾನದ ಮೂಲಕ ನಮ್ಮ ಸ್ಥಳಕ್ಕೆ ಹೋಗಲು ಅನುಮತಿ ಕೊಡಿ ಎಂದು ಗೃಹ ಸಚಿವಾಲಯಕ್ಕೆ ಪತ್ರ ಕಳುಹಿಸಿ ಕೊಟ್ಟಿದ್ದರು. ಆದರೆ ಅದನ್ನು ತಿರಸ್ಕರಿಸಿದ್ದು ಇಂತಹ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಆದುದರಿಂದ ಈ ದಾಳಿಯ ಹಿಂದೆ ಇರುವ ಕಾಣದ ಕೈಗಳನ್ನು ಮೊದಲು ಕಂಡುಹಿಡಿಯ ಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಖತೀಬ್ ರಶೀದ್, ಸದಸ್ಯರುಗಳಾದ ಇಕ್ಬಾಲ್ ಕಟಪಾಡಿ, ಮಹಮ್ಮದ್ ಮರಕಡ, ಇದ್ರೀಸ್ ಹೂಡೆ, ಮುಶೀರ್ ಇಂದ್ರಾಳಿ, ಅಬ್ದುಲ್ ಅಝೀಜ್ ಆದಿಉಡುಪಿ, ಮುನೀರ್ ಅಹ್ಮದ್, ರಿಯಾಜ್ ಕುಕ್ಕಿಕಟ್ಟೆ, ತಾಲೂಕು ಘಟಕದ ಅಧ್ಯಕ್ಷ ಶಾಹಿದ್ ಉಪಸ್ಥಿತರಿದ್ದರು.