ಫೆ.22ರಿಂದ ಎಸ್ಒಎಂನಲ್ಲಿ ಅಂ.ರಾ. ವಿಚಾರಸಂಕಿರಣ
ಉಡುಪಿ, ಫೆ.20: ಮಣಿಪಾಲದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಇನ್ ಫೈನಾನ್ಸಿಯಲ್ ಇನ್ಕ್ಲೂಷನ್ನ ವತಿಯಿಂದ ಎರಡು ದಿನಗಳ ಮೂರನೇ ವಾರ್ಷಿಕ ಸಮ್ಮೇಳನ ಫೆ.22 ಮತ್ತು 23ರಂದು ಮಣಿಪಾಲ ಎಂಐಟಿಯ ಸರ್ ಎಂ.ವಿ.ಹಾಲ್ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಚಾಲಕಿ ಡಾ.ಸವಿತಾ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿತ್ತೀಯ ಸೇರ್ಪಡೆ ಮೂಲಕ ಆರ್ಥಿಕ ಪರಿವರ್ತನೆಯ ಸೃಷ್ಟಿ: ಹೊಸತನ ಮತ್ತು ಸ್ಪೂರ್ತಿ’ ವಿಷಯದ ಮೇಲೆ ನಡೆಯುವ ಈ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಐಸಿಐಸಿಐ ಫೌಂಡೇಷನ್ನ ಸಿಓಓ ಅಂಜು ಅಗರ್ವಾಲ ಹಾಗೂ ಅಶೋಕದ ದಕ್ಷಿಣ ಏಶ್ಯಾ ವ್ಯವಹಾರದ ನಿರ್ದೇಶಕ ಸುನೀಲ್ ಜೌಹಾರಿ ಉದ್ಘಾಟಿಸಲಿದ್ದಾರೆ ಎಂದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಹಾಗೂ ವಿಷಯದ ಮೇಲೆ ಸಂವಾದಗಳು ನಡೆಯಲಿವೆ. ಒಟ್ಟು ಮೂರು ತಾಂತ್ರಿಕ ಅಧಿವೇಶಗಳು ಎರಡು ದಿನಗಳಲ್ಲಿ ನಡೆಯಲಿವೆ ಎಂದು ಡಾ.ಸವಿತಾ ನುಡಿದರು.
ಸಮಾರೋಪ ಸಮಾರಂಭ ಫೆ.23ರ ಅಪರಾಹ್ನ 12 ಗಂಟೆಗೆ ನಡೆಯಲಿದ್ದು, ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಬಿ.ಆರ್.ಹಿರೇಮಠ ಅವರು ಮುಖ್ಯಅತಿಥಿ ಯಾಗಿ ಭಾಗವಹಿಸಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಚಾರಸಂಕಿರಣ ದಲ್ಲಿ 100ಕ್ಕೂ ಅಧಿಕ ಮಂದಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಜಂಟಿ ಸಹಸಂಚಾಲಕರಾದ ಪ್ರೊ. ರೇಖಾ ಐ.ಎಸ್. ಹಾಗೂ ಪ್ರೊ.ಸೂರಜ್ ಫ್ರಾನ್ಸಿಸ್ ನರೋನ್ಹಾ ಉಪಸ್ಥತಿರಿದ್ದರು.