ಮಣಿಪಾಲ ವಾಗ್ಷಾದಲ್ಲಿ ವಿದ್ಯಾರ್ಥಿಗಳ ‘ರೆಸ್ಟೋರೆಂಟ್’ ‘ಬೇಕರಿ’
ಮಣಿಪಾಲ, ಫೆ.20: ಐಟಿಸಿಯ ಸಹಯೋಗದೊಂದಿಗೆ ಕಳೆದ 32 ವರ್ಷಗಳಿಂದ ಮಣಿಪಾಲದಲ್ಲಿ ಕಾರ್ಯಾಚರಿಸುತ್ತಿರುವ ಮಾಹೆ ಆಡಳಿತ ಕ್ಕೊಳಪಟ್ಟ ‘ವೆಲ್ಕಮ್ಗ್ರೂಪ್ ಗ್ರಾಜುವೆಲ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್’(ವಾಗ್ಷಾ)ನಲ್ಲಿ ಪಠ್ಯದ ಭಾಗವಾಗಿ ವಿದ್ಯಾರ್ಥಿಗಳಿಂದಲೇ ನಡೆಸಲ್ಪಡುವ ಹೊಟೇಲ್ ‘ಕ್ಲಾಸಿಕ್ ಕೆಫೆ’ ಹಾಗೂ ಬೇಕರಿ ‘ಮಿನಿಸ್ಟ್ರಿ ಆಫ್ ಬೇಕರಿ’ ಕಾರ್ಯಾರಂಭ ಮಾಡಿವೆ.
ವೆಲ್ಕಮ್ಗ್ರೂಪ್ ಉದ್ಯಮ ಅಭಿವೃದ್ಧಿ ಸೆಲ್ನ ಭಾಗವಾಗಿ ಹೊಟೇಲ್ ಕಲಿಕೆಯ ವಿದ್ಯಾರ್ಥಿಗಳಿಗೆ ಆತಿಥ್ಯ ಹಾಗೂ ಅಡುಗೆ ಕಲೆಗಳನ್ನು ಪ್ರಾಯೋಗಿಕ ವಾಗಿ ಕಲಿಸಲು ಈ ಯೋಜನೆಯನ್ನು ಇದೀಗ ಪೈಲೆಟ್ ಯೋಜನೆಯಾಗಿ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ವಾಗ್ಷಾದ ಪ್ರಾಂಶುಪಾಲರಾದ ಚೆಫ್ ಕೆ.ತಿರುಜ್ಞಾನ ಸಂಬಂಧಮ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳ ಭಾಗವಾಗಿ ಪಾಠದ ಜೊತೆಗೆ ಊಟೋಪಾಚಾರಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲು ಇದನ್ನು ಪ್ರಾರಂಭಿಸಲಾಗಿದೆ. ದಿನದ ಮೆನುವನ್ನು ನಿರ್ಧರಿಸುವುದರಿಂದ ಹಿಡಿದು ಅಡುಗೆ ತಯಾರಿಸುವುದು, ಗ್ರಾಹಕರಿಗೆ ಬಡಿಸುವುದು ಹಾಗೂ ಹೊಟೇಲ್ನ ಆಡಳಿತವನ್ನು ನಿರ್ವಹಿಸುವುದನ್ನು ಇಲ್ಲಿ ವಿದ್ಯಾರ್ಥಿಗಳೇ ಮಾಡುತ್ತಾರೆ.
ಇದರೊಂದಿಗೆ ಹಣಕಾಸಿನ ನಿರ್ವಹಣೆ, ಹೊಟೇಲ್ನ ಸ್ವಚ್ಛತೆ ಹಾಗೂ ಇತರ ವಿಷಯಗಳ ಜವಾಬ್ದಾರಿಯೂ ವಿದ್ಯಾರ್ಥಿಗಳದೇ ಆಗಿರುತ್ತದೆ. ಕಾಲೇಜಿನಿಂದ ಅವರಿಗೆ ಆರಂಭಿಕ ನಿಧಿಯನ್ನು ನೀಡಲಾಗುತ್ತದೆ. ಪ್ರಾಧ್ಯಾಪಕರು ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಲು ಹಾಗೂ ಸಲಹೆಗಳನ್ನು ನೀಡಲು ಸದಾ ಲಭ್ಯವಿರುತ್ತಾರೆ ಎಂದು ಕೆ.ತಿರು ವಿವರಿಸಿದರು.
ಸದ್ಯಕ್ಕೆ ವಿದ್ಯಾರ್ಥಿಗಳು 60 ಮಂದಿಗೆ ಮಧ್ಯಾಹ್ನದ ಭೋಜನವನ್ನು ತಯಾರಿಸುತ್ತಾರೆ. ಎಲ್ಲವೂ ಸುವ್ಯವಸ್ಥಿತ ರೀತಿಯಲ್ಲಿ ನಡೆದರೆ, ಶೀಘ್ರವೇ ಇದರ ಶಾಖೆಗಳನ್ನು ಮಾಹೆ ವಿವಿಯ ಫುಡ್ಕೋರ್ಟ್ ಹಾಗೂ ಎಂಐಟಿಯ ಪುಡ್ಕೋರ್ಟ್ನಲ್ಲಿ ತೆರೆಯಲಾಗುತ್ತದೆ. ವಿದ್ಯಾರ್ಥಿಗಳೇ ನಡೆಸುವ ಈ ರೆಸ್ಟೋರೆಂಟ್ನಲ್ಲಿ ಆಹಾರದ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆಯೇ ಹೊರತು, ಲಾಭ ಗಳಿಸುವುದಕ್ಕೆ ಗಮನ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ನ ಭಾಗವಾಗಿ ಸಮಗ್ರ ಅನುಭವ ನೀಡಲು ಈ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
‘ಪ್ರಾಯಶ: ದೇಶದ ಯಾವುದೇ ಹೊಟೇಲ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೇ ಹೊಟೇಲ್ ನಡೆಸುವ ಪ್ರಯೋಗ ಹೊಸದಾಗಿದೆ. ಅವರಿಗೆ ಎಲ್ಲಾ ವಿಷಯಗಳಲ್ಲೂ ಪ್ರಾಯೋಗಿಕ ಅನುಭವ ದೊರಕುವ ರೀತಿಯಲ್ಲಿ ನಾವು ಪಠ್ಯಕ್ರಮವನ್ನು ಅಳವಡಿಸಿದ್ದೇವೆ. ಹೀಗಾಗಿ ರೆಸ್ಟೋರೆಂಟ್ನ ಎಲ್ಲಾ ವಿಭಾಗಗಳ ಹಾಗೂ ಬೇಕರಿ ಉತ್ಪನ್ನಗಳ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಅನುಭವ ಹಾಗೂ ಮಾಹಿತಿ ಲಭಿಸುವಂತಾಗಲಿದೆ.’ ಎಂದು ತಿರು ನುಡಿದರು.
ಸದ್ಯಕ್ಕೆ ಸಸ್ಯಹಾರಿ ಹಾಗೂ ಮಾಂಸಹಾರಿಯಲ್ಲಿ ದಕ್ಷಿಣ ಭಾರತೀಯ ಆಹಾರ ಪದಾರ್ಥಗಳು ಅಪರಾಹ್ನದ ಭೋಜನಕ್ಕೆ ಲಭ್ಯವಿದೆ. ಮುಂದೆ ಇತರ ಖಾದ್ಯಗಳನ್ನು ಅಳವಡಿಸಲಾಗುತ್ತದೆ ಎಂದ ಅವರು, ನಮ್ಮ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಹೊಟೇಲ್ ಬ್ಯುಸಿನೆಸ್ಗೆ ತೆರಳುವುದರಿಂದ ಅವರಿಗೆ, ಗ್ರಾಹಕರ ನಿರ್ವಹಣೆ, ಆಡಳಿತ ನಿರ್ವಹಣೆಯಲ್ಲೂ ಅನುಭವ ಸಿಗುವಂತಾ ಗಲು ಇದು ಹೆಚ್ಚು ಉಪಯುಕ್ತವಾಗಿದೆ ಎಂದರು.
ಸದ್ಯಕ್ಕೆ ಮಣಿಪಾಲದ ವಿದ್ಯಾರ್ಥಿಗಳೇ 60-70 ಮಂದಿ ಗ್ರಾಹಕರಾಗಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಅಪರಾಹ್ನ 12ರಿಂದ 2ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ. ಮುಂದೆ ರಾತ್ರಿಯ ಊಟವನ್ನು ಪ್ರಾರಂಭಿಸಲಾಗುತ್ತದೆ. ಬೇಕರಿಯೂ ಸೋಮವಾರದಿಂದ ಗುರುವಾರದವರೆಗೆ ತೆರೆದಿರುತ್ತದೆ. ಇದರೊಂದಿಗೆ ನಮ್ಮದೇ ಬ್ರಾಂಡ್ನಲ್ಲಿ ಬ್ರೆಡ್, ಜಾಮ್, ವಿವಿಧ ಉಪ್ಪಿನಕಾಯಿ, ಸಾಸ್ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂದು ತಿರು ವಿವರಿಸಿದರು.
‘ಈ ಯೋಜನೆಯನ್ನು ಪ್ರಾರಂಭಿಸಲು ಐಟಿಸಿ ನಮಗೆ 10 ಲಕ್ಷ ರೂ.ಗಳನ್ನು ಮೂಲ ಬಂಡವಾಳವಾಗಿ ನೀಡಿದೆ. ಅದನ್ನು ಬಳಸಿ ಈಗಿನ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ. ಮುಂದೆ ಇದರಿಂದ ಬರುವ ಲಾಭವನ್ನು ವಿದ್ಯಾರ್ಥಿಗಳಲ್ಲೇ ಹಂಚುವ ಯೋಜನೆ ಇದೆ. ಅಡುಗೆಗೆ ಬಳಸುವ ತರಕಾರಿ ಹಾಗೂ ಹಣ್ಣುಗಳನ್ನು ನಾವು ಇಲ್ಲೇ ಸಾವಯವ ಬಳಸಿ ಬೆಳೆಯುತ್ತೇವೆ’ ಎಂದು ಪ್ರಾಂಶುಪಾಲ ಕೆ.ತಿರು ನುಡಿದರು.