ಚಿಪ್ಪೆಕಲ್ಲು ಮಾಹಿತಿ ಪಡೆಯಲು ಭಟ್ಕಳಕ್ಕೆ ಬಂದ ಸಂಶೋಧನ ತಂಡ
ಎರ್ನಾಕುಲಂ ಪ್ರಯೋಗಾಲಯಕ್ಕೆ ಮಾದರಿ ರವಾನಿಸುವ ಸಾಧ್ಯತೆ
ಭಟ್ಕಳ, ಫೆ. 20: ಇತ್ತಿಚೆಗೆ ಕಳೆದ ಎರಡು ಮೂರು ದಿನಗಳ ಹಿಂದೆ ಭಟ್ಕಳ ತಾಲೂಕಿನಾದ್ಯಂತ ಚಿಪ್ಪೆಕಲ್ಲು ಮಾಂಸ (ಬೆಳಚು) ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಲು ಮಂಗಳೂರು ಸೆಂಟ್ರಲ್ ಮರೈನ್ ಫಿಶಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಡಾ.ಗೀತಾ ಶಶಿಕುಮಾರ್ ನೇತೃತ್ವದ ತಂಡ ಭಟ್ಕಳಕ್ಕೆ ಆಗಮಿಸಿಅಗತ್ಯ ಮಾಹಿತಿಯನ್ನು ಪಡೆದುಕೊಂಡಿದೆ.
ಸಂಶೋಧನೆಯನ್ನು ಕೈಗೊಂಡಿರುವ ತಂಡವು ಇಲ್ಲಿನ ಪುರಸಭಾ ಆರೋಗ್ಯಾಧಿಕಾರಿ ಸೋಜಿಯಾರನ್ನು ಭೇಟಿಯಾಗಿದ್ದು ಪ್ರಯೋಗಾಲಯಕ್ಕೆ ರವಾನಿಸಿದ ಚಿಪ್ಪಿಕಲ್ಲಿನ ಮಾದರಿಕುರಿತು ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಅಲ್ಲದೆ ಭಟ್ಕಳಕ್ಕೆ ಬರುವ ಚಿಪ್ಪೆಕಲ್ಲುಯಾವ ಪ್ರದೇಶದಿಂದ ಬಂದಿದೆ ಎನ್ನುವುದರ ಕುರಿತು ತಂಡವು ಮಾಹಿತಿ ಪಡೆಯುತ್ತಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಶೋಧಕಿಡಾ.ಗೀತಾ, ಚಿಪ್ಪೆಕಲ್ಲುಗಳಲ್ಲಿ ವಿವಿಧ ಪ್ರಕಾರಗಳಿದ್ದು ಇಲ್ಲಿ ಬಳಕೆಯಾಗಿರುವ ಚಿಪ್ಪೆಕಲ್ಲನ್ನು ಖಚಿತವಾಗಿ ಗುರುತಿಸುವ ಕೆಲಸ ಮೊದಲು ಆಗಬೇಕಿದೆ. ಇಲ್ಲಿ ಬಳಸಲಾದ ಚಿಪ್ಪೆಕಲ್ಲಿನ ಮಾದರಿಯನ್ನು ಪಡೆದುಕೊಂಡು ಅಂತಿಮಾ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಎರ್ನಾಕುಲಂ ನಲ್ಲಿ ಪರೀಕ್ಷೆ ಸಾಧ್ಯತೆ: ಚಿಪ್ಪೆಕಲ್ಲು ಮಾಂಸದಲ್ಲಿ ವಿಷಾಂಶಗಳು ಸೇರಿರುವಕುರಿತು ಶಂಕೆವ್ಯಕ್ತವಾಗಿದ್ದು ಮಂಗಳೂರು ಪ್ರಯೋಗಾಲಯದಲ್ಲಿ ಇದನ್ನು ಪರೀಕ್ಷೆಗೊಳಪಡಿಸುವುದ ಸಾಧ್ಯವಿಲ್ಲದ ಕಾರಣ ಖಚಿತ ಮಾಹಿತಿಗಾಗಿ ಚಿಪ್ಪೆಕಲ್ಲುಗಳನ್ನು ಎರ್ನಾಕುಲಂ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.