ಕೋಟ ಜೋಡಿ ಕೊಲೆ ಪ್ರಕರಣ: ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರಿಗೆ ನ್ಯಾಯಾಂಗ ಬಂಧನ
ಕುಂದಾಪುರ, ಫೆ. 20: ಕೋಟ ಮಣೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳನ್ನು ಪೊಲೀಸರು ಇಂದು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಫೆ.15ರಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಚಂದ್ರಶೇಖರ್ ರೆಡ್ಡಿ (48) ಹಾಗೂ ಸುಜಯ್ (22) ಎಂಬವರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಕುಂದಾಪುರ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು. ಅದೇ ರೀತಿ ಫೆ.19ರಿಂದ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಯಲ್ಲಿದ್ದ ಆರೋಪಿ ಪೊಲೀಸ್ ಸಿಬ್ಬಂದಿ ಪವನ್ ಅಮೀನ್ನನ್ನು ಪೊಲೀಸರು ತನಿಖೆ ಪೂರ್ಣಗೊಳಿಸಿ ಅವಧಿಗೆ ಮುನ್ನವೇ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ನ್ಯಾಯಾಧೀಶ ಶ್ರೀಕಾಂತ ಎನ್.ಎ. ಮೂವರು ಆರೋಪಿಗಳನ್ನು ಮಾ.1ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಈ ವೇಳೆ ಸರಕಾರಿ ಸಹಾಯಕ ಅಭಿಯೋಜಕಿ ಸುಮಂಗಲಾ ನಾಯಕ್ ಹಾಜರಿದ್ದರು. ಈ ಮೂಲಕ ಪ್ರಕರಣದ ಎಲ್ಲ 17 ಮಂದಿ ಆರೋಪಿಗಳು ಕೂಡ ಮಾ.1ರವರೆಗೆ ನ್ಯಾಯಾಂಗ ಬಂಧನದಲ್ಲಿರುವಂತಾಗಿದೆ.