ಸುಳ್ಯ: ಕಲ್ಲಿನಿಂದ ಹೊಡೆದ ಪುತ್ರ; ಗಂಭೀರ ಗಾಯಗೊಂಡ ತಾಯಿ ಮೃತ್ಯು
ಸುಳ್ಯ, ಫೆ. 20: ಅಡಿಕೆ ಕುಟ್ಟುವ ಕಲ್ಲಿನಿಂದ ಪುತ್ರನೇ ತಾಯಿಗೆ ಹೊಡೆದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಮಂಗಳವಾರ ಮೃತಪಟ್ಟ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಯ್ಮಣ ಎಂಬಲ್ಲಿ ನಡದಿದ್ದು, ಇದೀಗ ಕೊಲೆ ಪ್ರಕರಣ ದಾಖಲಾಗಿದೆ.
ಚೀಂಕು (53) ಮೃತರು ಎಂದು ಗುರುತಿಸಲಾಗಿದೆ. ಅವರ ಪುತ್ರ ಗೋಪಾ ಯಾನೆ ಗೋಪಾಲ (32) ನನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.15 ರಂದು ನಾವೂರ ಮತ್ತು ಚೀಂಕು ದಂಪತಿ ಮನೆ ಜಗಲಿಯಲ್ಲಿ ಕುಳಿತು ಜೋರಾಗಿ ಕಿರುಚಿತ್ತಿದ್ದರು. ನಾವೂರ ವಿಪರೀತ ಮದ್ಯ ಸೇವಿಸಿದ್ದ ಹಿನ್ನೆಲೆಯಲ್ಲಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಗೋಪಾಲ ಇಬ್ಬರಲ್ಲೂ ಸುಮ್ಮನಿರುವಂತೆ ಗದರಿಸಿದ್ದು, ಆದರೂ ಇಬ್ಬರ ಜಗಳ ತಾರಕಕ್ಕೇರಿದಾಗ ಗೋಪಾಲ ತಾಯಿ ಚೀಂಕು ಅವರ ಹೊಟ್ಟೆಯ ಭಾಗಕ್ಕೆ ಅಡಿಕೆ ಕುಟ್ಟುವ ಕಲ್ಲಿನಿಂದ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಂಗಳವಾರ ಚೀಂಕು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.