ಸೋಮೇಶ್ವರ: ಉಚ್ಚಿಲ ದರ್ಗಾ ಉರೂಸ್ ಕಾರ್ಯಕ್ರಮ
ಉಳ್ಳಾಲ, ಫೆ. 22: ಇಂದು ಮುಸ್ಲಿಂ ಸಮುದಾಯದ ಮಕ್ಕಳು ವಿದ್ಯಾವಂತರಾಗುತ್ತಿದು, ಮುಂದಿನ ದಿನಗಳಲ್ಲಿ ಅವಿದ್ಯಾವಂತರು ಸಿಗಲು ಸಾಧ್ಯವೇ ಇಲ್ಲ. ಮಂಗಳೂರಿನಲ್ಲಿರುವ ಕ್ರೈಸ್ತ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮುಸ್ಲಿಂ ಹುಡುಗಿಯರು ಕಲಿಕೆಯಲಿ ಮುಂದಿದ್ದಾರೆ ಎಂದು ಮುಖ್ಯಮಂತ್ರಿಯವರ ಕಾರ್ಯದರ್ಶಿ ಐವನ್ ಡಿಸೋಜ ಅಭಿಪ್ರಾಯಪಟ್ಟರು.
ಸೋಮೇಶ್ವರ ಗ್ರಾಮದ ಉಚ್ಚಿಲ 407 ಜುಮಾ ಮಸೀದಿ ಅಸ್ಸಯ್ಯಿದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹ್ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಪ್ರಯುಕ್ತ ಧ್ವಜಾರೋಹಣ ಶುಕ್ರವಾರ ಮಸೀದಿಯ ವಠಾರದಲ್ಲಿ ನಡೆಯಿತು.
ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ಕೊಡುತ್ತಿದ್ದೆ ಎಂದು ಸಿದ್ದರಾಮಯ್ಯನವರು ಹೇಳಿದ ಮಾತು ಸತ್ಯ. ದೇಶದಲ್ಲಿ ಅಲ್ಪಸಂಖ್ಯಾತರಿಗೆ 15ಸಾವಿರ ಕೋಟಿ ಬಜೆಟ್ ಇದ್ದರೆ, ನಮ್ಮ ರಾಜ್ಯವೊಂದರಲ್ಲೇ 9,256 ಕೋಟಿ ಬಜೆಟ್ ಇದೆ. ಮುಂದೆಯೂ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಉಲಮಾ, ಉಮರಾ ಸಮ್ಮೇಳನ, ಸೌಹಾರ್ದ ಸಂಗಮ ಸಹಿತ 12 ದಿನ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಮಾತ್ರವಲ್ಲದೆ ಕೇರಳದಿಂದಲೂ ಧಾರ್ಮಿಕ ಗುರುಗಳು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸಲಾಂ ಉಚ್ಚಿಲ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾ.27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಉರೂಸ್ ಕಾರ್ಯಕ್ರಮದ ವಿವರವುಳ್ಳ ಕರಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಪ ಪಿ.ಎ.ಅಬ್ಬಾಸ್ ಹಾಜಿ ಪೆರಿಬೈಲ್, ಖತೀಬ್ ಮೌಲಾನಾ ಇಬ್ರಾಹಿಂ ಫೈಝಿ, ಉಪಾಧ್ಯಕ್ಷ ಅಬ್ದುಲ್ ಸಲಾಂ, ಕಾರ್ಯಾಧ್ಯಕ್ಷ ಅಬೂಬಕ್ಕರ್ ಹಾಜಿ, ಪ್ರಮುಖರಾದ ಯು.ಬಿ.ಎಂ.ಮುಹಮ್ಮದ್ ಹಾಜಿ, ಅಬ್ಬಾಸ್ ಹಾಜಿ ಮಜಲ್, ಹಮೀದ್ ಪೆರಿಬೈಲ್, ಇಸ್ಮಾಯಿಲ್, ಹಸೈನಾರ್ ಹಾಜಿ, ಮೊಹ್ಸಿನ್ ರಹ್ಮಾನ್, ಇಸ್ಮಾಯಿಲ್ ಕೊಪ್ಪಳ, ಇರ್ಷಾದ್ ನಯಾಪಟ್ನ, ಇಸ್ಮಾಯಿಲ್ ಎನ್., ಎಂ.ಪಿ.ಮುಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು.