ಬಸ್- ಟಿಪ್ಪರ್ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು; 21 ಮಂದಿಗೆ ಗಾಯ
ಕಾರ್ಕಳ, ಫೆ. 23: ಬೆಳ್ಮಣ್- ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಇಂದು ಸಂಜೆ 5:30ರ ಸುಮಾರಿಗೆ ಬಸ್ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ಅಪ ಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟು, 4 ಮಂದಿ ಗಂಭೀರ ಸೇರಿ ದಂತೆ 21 ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಮಂಗಳೂರು ನೀರುಮಾರ್ಗದ ಬೊಂಡೆಂತಿಲ ನಿವಾಸಿ ಶಿವಾನಂದ ಪೂಜಾರಿ ಎಂಬವರ ಮಗಳು ಮೋಕ್ಷಿತ (18) ಎಂದು ಗುರುತಿಸ ಲಾಗಿದೆ. ಬೆಳ್ಮಣ್ ಕಡೆಯಿಂದ ಶಿರ್ವ ಕಡೆ ಹೋಗುತ್ತಿದ್ದ ಬಸ್ಗೆ ಎದುರಿನಲ್ಲಿ ಬರುತ್ತಿದ್ದ ಟಿಪ್ಪರ್ ಮುಖಾಮುಖಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮೋಕ್ಷಿತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.
ಉಳಿದಂತೆ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೃತ ಮೋಕ್ಷಿತಳ ತಾಯಿ ಸುಂದರಿ ಹಾಗೂ ಅಕ್ಕ ಶ್ವೇತಾ ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಮಣಿಪಾಲ ಕೆಎಂಸಿಯಲ್ಲಿ ಎಂಟು ಮಂದಿ, ಉಡುಪಿ ಖಾಸಗಿ ಆಸ್ಪತ್ರೆಗಳಲ್ಲಿ ಏಳು ಮಂದಿ, ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೂವರು, ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಎರಡೂ ವಾಹನಗಳ ಚಾಲಕರು ಸೇರಿದ್ದಾರೆ.
ಮೃತ ಮೋಕ್ಷಿತ ಮಂಗಳೂರು ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಇವರು ತನ್ನ ಅಕ್ಕ ಮತ್ತು ತಾಯಿ ಜೊತೆ ಶಿರ್ವದಲ್ಲಿರುವ ಅಣ್ಣನ ಮನೆಗೆ ಹೊರಟಿದ್ದರು. ಅಪಘಾತದ ತೀವ್ರತೆಗೆ ಬಸ್ ಹಾಗೂ ಟಿಪ್ಪರ್ ಎದುರಿನ ಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತ ದಿಂದ ರಸ್ತೆ ಸಂಚಾರದಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಿತ್ತು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.