ಶಿಕ್ಷಣ ಮಾನವ ಸಂಪನ್ಮೂಲ ಬೆಳೆಸುವ ಆಡೊಂಬಲ: ವೀರಪ್ಪ ಮೊಯ್ಲಿ
ಮಂಗಳೂರು ವಿವಿಯ ಕಾಲೇಜಿನ ಪುನಶ್ಚೇತನಗೊಂಡ ರವೀಂದ್ರ ಕಲಾಭವನ ಸಂಕೀರ್ಣ ಉದ್ಘಾಟನೆ
ಮಂಗಳೂರು, ಫೆ.26: ಶಿಕ್ಷಣ ಕೇವಲ ಪದವಿ ಗಳಿಕೆಗಾಗಿ ಮಾತ್ರವಲ್ಲ, ಅದು ಮಾನವ ಸಂಪನ್ಮೂಲವನ್ನು ಬೆಳೆಸುವ ಆಡೊಂಬಲ ಎಂದು ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗದ ನೆರವಿನಿಂದ ಪುನಶ್ಚೇತನಗೊಂಡ ರವೀಂದ್ರ ಕಲಾಭವನ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು, ಅಸಾಧ್ಯಗಳನ್ನು ಅನ್ವೇಷಣೆಗಳ ಮೂಲಕ ಸಾಧ್ಯಗೊಳಿಸುವಲ್ಲಿ ಪ್ರೇರಣಾ ಸ್ಥಳ ಕಾಲೇಜುಗಳು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಸೃಜನಾತ್ಮಕ ಕಲೆಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸುವಲ್ಲಿ ಪ್ರೇರೇಪಿಸುತ್ತದೆ. ಅದಕ್ಕೆ ತಾನೂ ಉದಾಹರಣೆಯಾಗಿದ್ದೇನೆ ಎಂದು ಮೊಯ್ಲಿ ಹೇಳಿದರು. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ವೀರಪ್ಪ ಮೊಯ್ಲಿ, ಸಮಾರಂಭದಲ್ಲಿ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ, ತಮಗೆ ಕಲಿಸಿದ ಅಧ್ಯಾಪಕರನ್ನು ಸ್ಮರಿಸಿಕೊಂಡರು.
150 ವರ್ಷಗಳ ಇತಿಹಾಸ ಹೊಂದಿರುವ ಕಾಲೇಜಿನ ಪುನಶ್ಚೇತನಕ್ಕೆ ಹೆಚ್ಚುವರಿ 1.14 ಕೋಟಿ ರೂ.ಗಳ ಬೇಡಿಕೆ ಇದೆ. ಈ ಬಗ್ಗೆ ಸಮರ್ಪಕ ಯೋಜನೆ ತಯಾರಿಸಿಕೊಟ್ಟಲ್ಲಿ ಅನುದಾನ ಒದಗಿಸಲು ಕ್ರಮ ವಹಿಸುವುದಾಗಿ ಮೊಯ್ಲಿ ಈ ಸಂದರ್ಭ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ತಾವೆಷ್ಟು ದೊಡ್ಡ ವ್ಯಕ್ತಿಗಳಾಗಿದ್ದರೂ ತಾವು ಕಲಿತ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡುವ ಮೂಲಕ ಆ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಬಹುದು ಎಂಬುದನ್ನು ಡಾ.ಎಂ.ವೀರಪ್ಪ ಮೊಯ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.
ಮನಪಾ ಮೇಯರ್ ಭಾಸ್ಕರ ಕೆ., ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಎ.ಎಂ.ಖಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಣ್ಣ ನಾಯ್ಕಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರವೀಂದ್ರ ಕಲಾಭವನ ಸಂಕೀರ್ಣದ ಪುನಶ್ಚೇತನ ಕಾರ್ಯದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ. ಸ್ವಾಗತಿಸಿದರು.
ಶೂನ್ಯ ಫಲಿತಾಂಶದಲ್ಲಿದ್ದ ಕಾಲೇಜಿನಲ್ಲಿ ಮತ್ತೆ ಶೇ.95 ಫಲಿತಾಂಶ!
‘‘ರಾಜ್ಯದಲ್ಲಿ ಶಿಕ್ಷಣ ಸಚಿವನಾಗಿದ್ದ ವೇಳೆ ನಾನು ಕಲಿತ ಕಾಲೇಜಿಗೆ ಭೇಟಿ ನೀಡಬೇಕೆಂದು ಬಯಸಿದ್ದೆ. ಆಗ ಕಾಲೇಜಿನ ಕುಲಪತಿ ಡಾ.ಸವದತ್ತಿ ನಿರಾಕರಿಸಿ, ಬಳಿಕ ಅನುಮಾನದಿಂದಲೇ ನನ್ನನ್ನು ಕರೆತಂದಿದ್ದರು. ಆಗ ಇಲ್ಲಿನ ಪರಿಸ್ಥಿತಿ ಯುದ್ಧ ನಂತರದ ರೀತಿಯಲ್ಲಿತ್ತು. ಚೆಲ್ಲಾಪಿಲ್ಲಿಯಾದ ಮೇಜು, ಡೆಸ್ಕ್ಗಳಿಂದ ಕೂಡಿದ ತರಗತಿ. ನನಗೆ ತೀರಾ ಆಘಾತವಾಗಿತ್ತು. ಆ ಸಂದರ್ಭದಲ್ಲಿ ಇದನ್ನು ವಿವಿ ಕಾಲೇಜು ಮಾಡಿ ನಿರ್ವಹಿಸುವಂತೆ ಸಲಹೆ ನೀಡಿದೆ. ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆಗಿನ ಫಲಿತಾಂಶ ಶೇ.0ಯವರೆಗೆ ತಲುಪಿತ್ತು. 1993ರ ಮಾರ್ಚ್ 6ರಿಂದ ಈ ಕಾಲೇಜಿನಲ್ಲಿ ಹೊಸ ಪರ್ವ ಆರಂಭಗೊಂಡಿತು. ಬಡ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವ ಈ ಕಾಲೇಜು ಇದೀ ಶೇ. 95 ಫಲಿತಾಂಶ ಪಡೆಯುತ್ತಿದೆ’’ ಎಂದು ಡಾ.ಎಂ.ವೀರಪ್ಪ ಮೊಯ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎರಡನೇ ಬಾರಿಗೆ ಉದ್ಘಾಟನೆ!
ಪುನಶ್ಚೇತನಗೊಂಡ ರವೀಂದ್ರ ಕಲಾಭವನದ ಉದ್ಘಾಟನಾ ಸಮಾರಂಭ 2018ರ ಜೂನ್ 2ರಂದು ನಡೆದಿದ್ದು, ಇಂದು 2ನೇ ಬಾರಿಗೆ ಉದ್ಘಾಟನಾ ಕಾರ್ಯ ನಡೆಯಿತು. 150 ವರ್ಷಗಳ ಇತಿಹಾಸ ಹೊಂದಿರುವ, ಪುರಾತತ್ವ ಇಲಾಖೆಯಿಂದ ಐತಿಹಾಸಿಕ ಸ್ಮಾರಕವಾಗಿ ಗುರುತಿಸಲ್ಪಟ್ಟಿರುವ ಈ ಕಾಲೇಜಿಗೆ 1922ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ್ ಠಾಗೂರ್ ಭೇಟಿ ನೀಡಿದ್ದರು