ಯುನಿವೆಫ್ ಕರ್ನಾಟಕ ವತಿಯಿಂದ 'ಬದಲಾವಣೆಗಾಗಿ ನಾನು' ಸದಸ್ಯತ್ವ ಅಭಿಯಾನ
ಮಂಗಳೂರು, ಮಾ. 4: ಸಬಲೀಕೃತ, ಸದೃಢ ಸಮುದಾಯಕ್ಕಾಗಿ ಸುಶಿಕ್ಷಿತ, ಸುರಕ್ಷಿತ, ಸಚ್ಚರಿತ ಸಮಾಜಕ್ಕಾಗಿ ಯುನಿವೆಫ್ ಕರ್ನಾಟಕ ಮಾ. 1ರಿಂದ ಎ. 7ರ ತನಕ "ಬದಲಾವಣೆಗಾಗಿ ನಾನು" ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಫಳ್ನೀರ್ ನ ದಾರುಲ್ ಇಲ್ಮ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ "ಜಗತ್ತಿನ ಶ್ರೇಷ್ಠ ಸಮುದಾಯದ ವರ್ತಮಾನವು ಬಹಳ ಖೇದಕರವಾಗಿದೆ. 6ನೇ ಶತಮಾನ ಕ್ಕಿಂತ ಮುಂಚೆ ಜಗತ್ತಿನಲ್ಲಿ ಇದ್ದ ಪರಿಸ್ಥಿತಿಯು ವರ್ತಮಾನದ ನಾಗರಿಕ ಜಗತ್ತಿನಲ್ಲಿಯೂ ನಾವು ಕಾಣುತ್ತಿರುವುದು ವಾಸ್ತವ. ಒಳಿತನ್ನು ಆಜ್ಞಾಪಿಸುವ ಕೆಡುಕನ್ನು ನಿರ್ಮೂಲನ ಗೊಳಿಸುವ ಹೊಣೆಗಾರಿಕೆಯೊಂದಿಗೆ ತನ್ನ ಅಸ್ತಿತ್ವವನ್ನು ಜಗತ್ತಿನಲ್ಲಿ ಸಾರಿದ ಮುಸ್ಲಿಂ ಸಮುದಾಯ ಇಂದು ವೈಚಾರಿಕ ಗುಲಾಮಗಿರಿಗೆ ತುತ್ತಾಗಿದೆ ಎಂಬುದು ನಿರಾಕರಿಸಲಾಗದ ವಾಸ್ತವಿಕತೆಯಾಗಿದೆ. ತನ್ನ ನೈಜ ಹೊಣೆಗಾರಿಕೆಯನ್ನು ಮರೆತು ಸಮುದಾಯವು ಐಚ್ಛಿಕ ಕೆಲಸಗಳಿಗೆ ಪ್ರಾಧ್ಯಾನ್ಯತೆ ನೀಡುತ್ತಿರುವುದೇ ಅನೇಕ ಸಮಸ್ಯೆಗಳ ಉಗಮಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಉದ್ಯಮಿ ಅಬ್ದುಲ್ ಹಮೀದ್ ಕೋಹಿನೂರ್ ಮುಖ್ಯ ಅತಿಥಿಯಾಗಿದ್ದರು. ಮಂಗಳೂರು ಶಾಖೆಯ ಅಧ್ಯಕ್ಷ ನೌಫಲ್ ಹಸನ್ ಕಿರಅತ್ ಪಠಿಸಿದರು. ಅಭಿಯಾನ ಸಂಚಾಲಕ ಹುದೈಫ್ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.