ಕಾಪು ಪುರಸಭೆಯ 2019-20ನೇ ಸಾಲಿನ ಬಜೆಟ್ ಸಭೆ
ಪಡುಬಿದ್ರಿ: ಕಾಪು ತಾಲೂಕಾಗಿ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಕನಿಷ್ಠ ನೂರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಸಚಿವರಾದ ಆರ್ವಿ ದೇಶಪಾಂಡೆ ಮತ್ತು ಕೃಷ್ಣ ಭೈರೇಗೌಡ ಅವರಲ್ಲಿ 25 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದ್ದಾರೆ.
ಬುಧವಾರ ನಡೆದ ಕಾಪು ಪುರಸಭೆಯ 2019-20ನೇ ಸಾಲಿನ ಬಜೆಟ್ ಸಭೆಯಲ್ಲಿ ಅವರು ಮಾತನಾಡಿದರು. ಕಾಪು ಪುರಸಭೆಗೆ ವ್ಯಾಪ್ತಿಯ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅಲ್ಲದೆ ತಾಲ್ಲೂಕು ಕೇಂದ್ರವಾಗಿರುವುದರಿಂದ 36 ಇಲಾಖೆಗಳು ಅಗತ್ಯತೆ ಇದೆ. ಈ ಬಗ್ಗೆಯೂ ಮನವಿ ಸಲ್ಲಿಸಲಾಗಿದೆ ಎಂದರು.
ಕಾಪು ಪುರಸಭೆಯ 2019-20ನೇ ಸಾಲಿನ ಬಜೆಟ್ನ ಆರಂಭಿಕ ಶುಲ್ಕು 4,78,77,325.18 ಹಾಗೂ ವರ್ಷದ ಜಮೆ 7,83,90900.00 ಸೇರಿ 112,62,68,225 ಆದಾಯ ನಿರೀಕ್ಷಿಸಲಾಗಿದ್ದು, ವರ್ಷದ ಅಂದಾಜು ವೆಚ್ಚ 12,58,07,900.00 ಕಳೆದು 4,60,325.18 ರೂ ಮಿಗತೆ ಅಂದಾಜಿಸಲಾಗಿದೆ. ಅಲ್ಲದೆ ಈ ಭಾರಿ ಮನೆ ರಿಪೇರಿ, ಪಾರ್ಕ್ ನಿರ್ಮಾಣ, ಸಂಚಾರ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.
ಬಾಕಿ ಬಿಲ್ಲುಗಳ ಪಾವತಿಯ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ರಾಯಪ್ಪ 32 ಲಕ್ಷ ಬಾಕಿ ಇತ್ತು ಈಗ 17 ಲಕ್ಷ ಇದೆ. ಟ್ರಜರಿಯಲ್ಲಿ 5 ಲಕ್ಷ ಜಮೇ ಇದ್ದು ಬಾಕಿ 12 ಲಕ್ಷವನ್ನು ಮಾರ್ಚ್ ಅಂತ್ಯಕ್ಕೆ ಹೊಂದಿಸಿಕೊಂಡು ಚುಕ್ತಾ ಮಾಡುವ ಭರವಸೆ ನೀಡಿದರು.
ಕಾಪು ಪೇಟೆಯಲ್ಲಿ ನಿಯಮಬದ್ದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಬಸ್ಸುಗಳ ಆರ್ಭಟಕ್ಕೆ ಕಡಿವಾಣ ಹಾಕುವ ಬಗ್ಗೆ ಬೀದಿನಾಗಳ ಹಾವಳಿಗೆ ಕಡಿವಾಣ ಹಾಕಲು ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಸದಸ್ಯ ಅರುಣ್ ಶೆಟ್ಟಿ ಪಾದೂರು ಒತ್ತಾಯಿಸಿದರು.
ಆಡಳಿತಾಧಿಕಾರಿ ಕುಂದಾಪುರ ವಿಭಾಗಾಧಿಕಾರಿ ಡಾ| ಎಸ್.ಎಸ್. ಮಧುಕೇಶ್ವರ್ ಹಾಜರಿದ್ದರು.