ಮಹಿಳೆ ಇಂದು ಕೇವಲ ಗೃಹಲಕ್ಷ್ಮಿಯಾಗಿ ಉಳಿದಿಲ್ಲ: ನಯನಾ ಪ್ರಸನ್ನ
ಭಟ್ಕಳ: ಮಹಿಳೆಯರು ಇಂದು ಕೇವಲ ಗೃಹಲಕ್ಷ್ಮಿಯಾಗಿ ಉಳಿದಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನ್ಯಾಯಾಧೀಶರಾಗಿ, ಆರೋಗ್ಯ ಕಾಪಾಡುವ ವೈದ್ಯರಾಗಿ, ದೇಶಕಾಯುವ ಸೈನಿಕರಾಗಿ, ಸಾಂಸ್ಕೃತಿಕ ರಾಯಭಾರವಾದ ನೃತ್ಯ, ಸಂಗೀತಾದಿ ಕಲಾ ಪ್ರಕಾರಗಳಲ್ಲಿ ಕಾಣಬಹುದು ಎಂದು ಭಟ್ಕಳದ ಝೆಂಕಾರ ನೃತ್ಯ ಕಲಾ ಶಾಲೆಯ ಹೆಸರಾಂತ ನೃತ್ಯ ಶಿಕ್ಷಕಿ ನಯನಾ ಪ್ರಸನ್ನ ಹೇಳಿದರು.
ಅವರು ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ನಾಯಕ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತುಂಬಾ ಸಾಧನೆ ಮಾಡಿದ್ದಾರೆ. ಅದರ ಜೊತೆಗೆ ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಆರಂಭದಲ್ಲಿ ಪ್ರಾಚಾರ್ಯರಾದ ಡಾ. ಆರ್. ನರಸಿಂಹಮೂರ್ತಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಿಕ್ಷಣಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಉಪನ್ಯಾಸಕ ಗಜಾನನ ಶಾಸ್ತ್ರಿ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ಚಂದ್ರಿಕಾ ಮತ್ತು ಅಜಿತ್ ಉಪಸ್ಥಿತರಿದ್ದರು.
ಝೆಂಕಾರ ನೃತ್ಯ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯ ಪ್ರದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಂದು ಮಧ್ಯಾಹ್ನ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಹಾಡು, ನೃತ್ಯ, ಮಿಮಿಕ್ರಿ, ನಾಟಕಗಳ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.