ಮರ ಮೈಮೇಲೆ ಬಿದ್ದು ಬಾಲಕ ಮೃತ್ಯು
ಹಿರಿಯಡ್ಕ, ಮಾ.18: ಮರವೊಂದು ಅಕಸ್ಮಿಕವಾಗಿ ಬಿದ್ದ ಪರಿಣಾಮ ಗೇರು ಹಣ್ಣು ಮತ್ತು ಬೀಜವನ್ನು ಹೆಕ್ಕುತ್ತಿದ್ದ ಬಾಲಕ ಮೃತಪಟ್ಟ ಘಟನೆ ಮಾ.17ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು 41 ಶಿರೂರು ಗ್ರಾಮದ ಹರಿಖಂಡಿಗೆ ನಿವಾಸಿ ಹರಿಶ್ಚಂದ್ರ ಆಚಾರ್ಯ ಎಂಬವರ ಮಗ ಪ್ರಣಿತ್ (9) ಎಂದು ಗುರುತಿಸಲಾಗಿದೆ. ಕಲ್ಲಾಳ ಹಾಲಕ್ಕಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೆ ತರಗತಿ ವಿದ್ಯಾರ್ಥಿ ಯಾಗಿದ್ದ ಪ್ರಣಿತ್, ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಯ ಜಾಗದಲ್ಲಿರುವ ಗೇರು ಮರದಿಂದ ಬಿದ್ದಿರುವ ಗೇರು ಹಣ್ಣು ಮತ್ತು ಬೀಜವನ್ನು ಹೆಕ್ಕುತ್ತಿದ್ದನು.
ಆಗ ಹಳೆಯ ಗೇರು ಮರವೊಂದು ಆಕಸ್ಮಿಕವಾಗಿ ಪ್ರಣಿತನ ಮೈಮೇಲೆ ಹಾಗೂ ತಲೆಗೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಣಿತ್ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story