ದ.ಕ. ಕಾಂಗ್ರೆಸ್ ಅಭ್ಯರ್ಥಿ : ಜಿಲ್ಲೆಯ ಎಲ್ಲ ಆಕಾಂಕ್ಷಿಗಳಿಗೆ, ನಾಯಕರಿಗೆ ದಿಲ್ಲಿ ಬುಲಾವ್
ಮಂಗಳೂರು, ಮಾ. 20 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರಿತು ಅಂತಿಮ ತೀರ್ಮಾನ ಗುರುವಾರ ದೆಹಲಿಯಲ್ಲಿ ಅಗಲಿದ್ದು ಜಿಲ್ಲೆಯ ಘಟಾನುಘಟಿ ನಾಯಕರೆಲ್ಲರಿಗೂ ದಿಲ್ಲಿಗೆ ಬುಲಾವ್ ಬಂದಿದೆ.
ಟಿಕೆಟ್ ಆಕಾಂಕ್ಷಿಗಳಾದ ರಮಾನಾಥ ರೈ, ಬಿ.ಕೆ. ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ, ಕಣಚೂರು ಮೋನು, ಮಿಥುನ್ ರೈ, ಮಮತಾ ಗಟ್ಟಿ, ಧನಂಜಯ ಅಡ್ಪಂಗಾಯ, ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲೆಯ ಎಲ್ಲ ಪರಾಜಿತ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಗುರುವಾರ ದಿಲ್ಲಿಗೆ ಬರುವಂತೆ ಸೂಚಿಸಿದೆ.
ಪ್ರಮುಖ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿರುವುದರಿಂದ ಟಿಕೆಟ್ ಸಿಗದವರು ಅಸಮಾಧಾನ ಪಟ್ಟುಕೊಳ್ಳದಂತೆ ಎಲ್ಲರಲ್ಲೂ ಚರ್ಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಹೈಕಮಾಂಡ್ ಬಯಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬಗ್ಗೆ ವಾರ್ತಾಭಾರತಿ ಜೊತೆ ಮಾತನಾಡಿದ ಸಚಿವ ಯು ಟಿ ಖಾದರ್ ಅವರು ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲೇ ಬೇಕು ಎಂದು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಅದಕ್ಕಾಗಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಚುನಾವಣೆಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಪಕ್ಷದ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು ಎಲ್ಲ ನಾಯಕರನ್ನು ದಿಲ್ಲಿಗೆ ಕರೆದಿದ್ದಾರೆ. ಗುರುವಾರ ಸಭೆ ನಡೆಯಲಿದೆ. ಅಂದು ಅಥವಾ ಶುಕ್ರವಾರ ಅಭ್ಯರ್ಥಿ ಘೋಷಣೆ ಆಗಲಿದೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಪಕ್ಷಕ್ಕಾಗಿ ದುಡಿದು ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.