ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ
ಉಡುಪಿ, ಮಾ. 21: ನನ್ನ ಮೇಲೆ ವಿಶ್ವಾಸ ಇಟ್ಟು ಅವಕಾಶ ನೀಡಿರುವ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಕೃತಜ್ಞತೆಗಳು. ನಾವೆಲ್ಲ ಒಗ್ಗಟ್ಟಾಗಿ ಬಿಜೆಪಿಯ ರಥ ಎಳೆಯುತ್ತೇವೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕುರಿತು ಇಂದು ಸಂಜೆ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಬಿಜೆಪಿಯಿಂದ 300 ಸಂಸದರು ಗೆದ್ದು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುತ್ತೇವೆ. ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಈ ಬಾರಿ ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರೇ ನಮ್ಮ ಸೇನಾನಿಗಳು. ಸೈನಿಕರು ಗಡಿಯಲ್ಲಿ ಯುದ್ದ ಮಾಡಿ ದಂತೆ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಮೋದಿಯನ್ನು ಗೆಲ್ಲಿಸಲು ಹಗಲಿರುಳು ದುಡಿಯುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಟಿಕೆಟ್ ಆಕಾಂಕ್ಷೆ ಪಡುವುದು ತಪ್ಪಲ್ಲ. ಟಿಕೆಟ್ ಸಿಕ್ಕಿದ ನಂತರ ಎಲ್ಲರು ಅಭ್ಯರ್ಥಿ ಪರ ದುಡಿಯುತ್ತಾರೆ ಎಂದು ಅವರು ತಿಳಿಸಿದರು.