ಮುಸ್ಲಿಮರಿಗೆ ಎರಡು ಟಿಕೆಟ್ ನೀಡದಿದ್ದರೆ ಎಂಎಲ್ಸಿ, ರಾಜ್ಯಸಭಾ ಸ್ಥಾನದ ಭರವಸೆ : ಯು ಟಿ ಖಾದರ್
ಮಂಗಳೂರು, ಮಾ. 22 : ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಕನಿಷ್ಠ ಎರಡು ಟಿಕೆಟ್ ನೀಡಲೇಬೇಕು ಎಂದು ಸಮುದಾಯದೊಳಗಿಂದ ಬಲವಾದ ಆಗ್ರಹ ಕೇಳಿ ಬರುತ್ತಿರುವ ಬೆನ್ನಿಗೇ ಪಕ್ಷದ ಹೈಕಮಾಂಡ್ ಈ ಬಗ್ಗೆ ದಿಲ್ಲಿಯಲ್ಲಿ ಚರ್ಚಿಸಿದೆ ಎಂದು ತಿಳಿದು ಬಂದಿದೆ.
ಪಕ್ಷದ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಈ ಬಗ್ಗೆ ರಾಜ್ಯದ ಎಲ್ಲ ಅಲ್ಪಸಂಖ್ಯಾತ ಮುಖಂಡರು ಹೋಗಿ ಚರ್ಚಿಸಿದ್ದೇವೆ. ಕನಿಷ್ಠ ಎರಡು ಟಿಕೆಟ್ ಗಳನ್ನು ನೀಡಲೇಬೇಕು ಎಂದು ಆಗ್ರಹಿಸಿದ್ದೇವೆ. ಪಕ್ಷ ಅದನ್ನು ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರು ಕೇಂದ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಖಚಿತ. ಇನ್ನೊಂದು ಕ್ಷೇತ್ರವನ್ನು ನೀಡಲು ಪರಿಗಣಿಸಲಾಗುತ್ತಿದೆ. ಸ್ಥಳೀಯ ಚುನಾವಣಾ ಲೆಕ್ಕಾಚಾರದಲ್ಲಿ ಎರಡನೇ ಟಿಕೆಟ್ ಕೊಡಲು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಬೇಗ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಿಗೆ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸ್ಥಾನ ನೀಡಿ ನ್ಯಾಯ ಒದಗಿಸಲಾಗುವುದು ಎಂದು ಹೈಕಮಾಂಡ್ ಭರವಸೆ ನೀಡಿದೆ ಎಂದು ಸಚಿವ ಯು ಟಿ ಖಾದರ್ ವಾರ್ತಾಭಾರತಿಗೆ ತಿಳಿಸಿದ್ದಾರೆ.