ಶಾಮಿಯಾನ ಒಕ್ಕೂಟದ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ: ಸಚಿವ ನಾಡಗೌಡ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯ
ಉಡುಪಿ, ಮಾ.23: ಶಾಮಿಯಾನ ಸಂಯೋಜಕರ ಒಕ್ಕೂಟದ ರಾಜ್ಯಾಧ್ಯಕ್ಷ ಮೆಹಬೂಬ್ ಮುಲ್ಲಾ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಕೂಡಲೇ ರಾಜೀನಾಮೆಯನ್ನು ಪಡೆಯಬೇಕು ಎಂದು ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟ ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟ ಸ್ಥಾಪಕಾಧ್ಯಕ್ಷ ಅಕ್ಬರ್ ಅಲಿ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನವರಿ ತಿಂಗಳಲ್ಲಿ ನಡೆದ ಪಶು ಮತ್ತು ಮತ್ಸ ಮೇಳದ ಶಾಮಿಯಾನ ಸೇರಿದಂತೆ ಇತರ ಟೆಂಡರ್ನ್ನು ಶರಣ ಬಸವೇಶ್ವರ ಶಾಮಿಯಾನ ಕಂಪೆನಿಗೆ 68ಲಕ್ಷ ರೂ.ಗೆ ನೀಡಲಾಗಿತ್ತು. ಅದರಲ್ಲಿ ಶಾಮಿಯಾನ ಮತ್ತು ಸೌಂಡ್ ವ್ಯವಸ್ಥೆಯನ್ನು ಮೆಹಬೂಬ ಮುಲ್ಲಾ ಅವರಿಗೆ 22ಲಕ್ಷ ರೂ.ಗೆ ವಹಿಸಿಕೊಟ್ಟಿದ್ದರು. ಆದರೆ ಮುಲ್ಲಾರಿಗೆ 16ಲಕ್ಷ ರೂ. ಚೆಕ್ ನೀಡಲಾಗಿತ್ತು ಎಂದರು.
ಆ ಚೆಕ್ನ್ನು ಡ್ರಾ ಮಾಡಲು ಬ್ಯಾಂಕಿಗೆ ಹೋಗುತ್ತಿದ್ದ ಮುಲ್ಲಾರನ್ನು ತಡೆದ ಸಚಿವ ನಾಡಗೌಡರ ಬೆಂಬಲಿಗರು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇದೇ ವಿಚಾರದಲ್ಲಿ ಅವರ ಮೇಲೆ ಹಲ್ಲೆ ನಡೆಸಿ, ಸಚಿವರ ಮುಂದೆ ಕರೆದು ಕೊಂಡು ಹೋಗಿದ್ದರು. ಅಲ್ಲೂ ಕೂಡ ಸಚಿವರ ಮುಂದೆಯೇ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ದೂರು ನೀಡಿದರೂ ಸಚಿವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಅವರು ಆರೋಪಿಸಿದರು.
ಇದರ ವಿರುದ್ಧ ಎ.16ರಂದು ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮನವಿ ಕೂಡ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸುಕೇಶ್ ಹೆಗ್ಡೆ ಕಾರ್ಕಳ, ಉಪಾ ಧ್ಯಕ್ಷ ಶೌಕತ್ ಅಲಿ, ಕಾರ್ಯದರ್ಶಿ ಹುಸೆನಾರ್ ಉಪಸ್ಥಿತರಿದ್ದರು.