ಅಂಜುಮನ್ ಬಿಬಿಎ, ಬಿಸಿಎ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ
ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಬಿಬಿಎ ಮತ್ತು ಬಿಸಿಎ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಅಂಜುಮನಾಬಾದ್ ಮೈದಾನದಲ್ಲಿ ಬುಧವಾರ ನಡೆಯಿತು.
ಕ್ರಿಡಾ ಧ್ವಜಾರೋಹಣಗೈದು ಕ್ರಿಡಾಕೂಟವನ್ನು ಉದ್ಘಾಟಿಸಿದ ಅಂಜುಮನ್ ಅಲುಮ್ನಿ (ಹಳೆ ವಿದ್ಯಾರ್ಥಿ) ಯುಎಇ ಯ ಡಿ.ಯು ಟೆಲಿಕಾಮ್ ಸೀನಿಯರ್ ಮ್ಯಾನೇಜರ್ ಸೈಯದ್ ಸಮೀರ್ ಸಖಾಫ್ ಮಾತನಾಡಿ, ಕ್ರೀಡೆ ಎನ್ನುವುದು ಕೇವಲ ಸೋಲು ಗೆಲುವು ಆಗಿರದೆ, ವ್ಯಕ್ತಿತ್ವ ವಿಕಸನಕ್ಕೆ ಆಧಾರವಾಗಿದೆ ಎಂದ ಅವರ, ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅಲ್ಲಿ ಒಂದೊಂದು ಕ್ಷಣವೂ ಎಷ್ಟೊಂದು ಮಹತ್ವದ್ದಾಗಿರುತ್ತದೆ ಎಂಬುದು ತಿಳಿಯುತ್ತಾರೆ. ಹಾಗೆ ಬದುಕಿನಲ್ಲಿ ಸಮಯ ಬಹಳ ಮುಖ್ಯವಾದದು ಎನ್ನುವುದನ್ನು ಕ್ರೀಡೆಗಳಿಂದ ತಿಳಿದುಕೊಳ್ಳಬಹುದು ಎಂದರು.
ಇಂದಿನ ದಿನಗಳಲ್ಲಿ ಕ್ರೀಡೆಯು ಕೂಡ ಒಂದು ಕರಿಯರ್ ಆಗಿದೆ. ಕ್ರೀಡೆಯಲ್ಲಿ ಬದುಕು ರೂಪಿಸಿಕೊಂಡು ದೇಶವಿದೇಶಗಳಲ್ಲಿ ತಮ್ಮ ಖ್ಯಾತಿಯನ್ನು ಗಳಿಸಿಕೊಂಡಿದ್ದನ್ನು ನಾವು ಕಾಣುತ್ತೇವೆ ಎಂದ ಅವರು, ಶಾಲಾ ಕಾಲೇಜುಗಳಲ್ಲಿ ಕ್ರೀಡಾಪಟುಗಳಿಗೆ ಗೌರವವಿದೆ ಎಂದರು.
ಅಂಜುಮನ್ ಕಾಲೇಜ್ ಬೋರ್ಡ್ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್ ಶಾಬಂದ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸಾಖ್ ಶಾಬಂದ್ರಿ, ಕಾರ್ಯದರ್ಶಿ ಆಫ್ತಾಬ್ ಖಮರಿ, ಪ್ರಾಂಶುಪಾಲ ಮುಹಮ್ಮದ್ ಮೊಹಸಿನ್, ದೈಹಿಕ ಶಿಕ್ಷಣ ನಿರ್ದೇಶಕ ಮೋಹನ್ ಮೇಸ್ತಾ, ವಿದ್ಯಾರ್ಥಿ ಕಾರ್ಯದರ್ಶಿ ಹಿದಾಯತ್ ರುಕ್ನುದ್ದೀನ್, ಮ್ಯಾನೇಜ್ಮೆಂಟ್ ಇವೆಂಟ್ ಕಾರ್ಯದರ್ಶಿ ಮುಹಮದ್ ಉಸ್ಮಾನ್ ಮುಲ್ಲಾ, ಕ್ರೀಡಾ ಕಾರ್ಯದರ್ಶಿ ಸಲ್ಮಾನ್ ಮತ್ತಿತರರು ಉಪಸ್ಥಿತರಿದ್ದರು.