ಬಿರುಗಾಳಿಯೊಂದಿಗೆ ಕರಾವಳಿಗೆ ಮೊದಲ ವರ್ಷಧಾರೆ
ಮಂಗಳೂರು, ಎ.2: ಕರಾವಳಿಯಲ್ಲಿ ಧಿಡೀರ್ ಕಾಣಿಸಿಕೊಂಡ ಧೂಳು ಸಹಿತ ಬಿರುಗಾಳಿಯ ಆರ್ಭಟಕ್ಕೆ ಕರಾವಳಿಗರು ಬೆಚ್ಚಿಬಿದ್ದಿದ್ದಾರೆ. ಈ ಮೂಲಕ ಕರಾವಳಿಗೆ ವರ್ಷದ ಮೊದಲ ವರ್ಷಧಾರೆಯು ಅಬ್ಬರದಿಂದ ಪಾದಾರ್ಪಣೆ ಮಾಡಿತು.
ನಗರದಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 5.40ರ ವೇಳೆಗೆ ಕಂಕನಾಡಿ, ವೆಲೆನ್ಸಿಯಾ, ಬೋಂದೆಲ್, ಕಾವೂರು ಸುತ್ತಮುತ್ತ ಧೂಳಿನ ಬಿರುಗಾಳಿ ಕಾಣಿಸಿಕೊಂಡು ರಸ್ತೆ ಕಾಣದಾಗಿತ್ತು. ಈ ವೇಳೆ ಸವಾರರು ಬೈಕ್ಗಳನ್ನು ನಿಲ್ಲಿಸಿದ ಸಂದರ್ಭಗಳೂ ಎದುರಾದವು.
ದ.ಕ. ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಂಡಿ, ಸುಳ್ಯ, ಉಪ್ಪಿನಂಗಡಿ ಸೇರಿದಂತೆ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಇನ್ನು ಕೆಲವೆಡೆ ತುಂತುರು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕರಾವಳಿಯಲ್ಲಿ ಬಿರುಗಾಳಿ ಆರ್ಭಟಿಸುತ್ತಾ, ಉತ್ತಮ ಮಳೆ ಸುರಿದಿದೆ. ಹಲವು ದಿನಗಳಿಂದ ಏರಿಕೆಯಾಗಿದ್ದ ತಾಪಮಾನದಿಂದ ಉಷ್ಣಾಂಶವು ಮಳೆಗೆ ಇಳಿಕೆ ಕಂಡು ವಾತಾವರಣ ತಂಪಾಗಿದೆ. ಕರಾವಳಿಯ ಜನತೆ ಒಂದೆಡೆ ತಣ್ಣನೆಯ ವಾತಾವರಣದಿಂದ ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ಆಹ್ಲಾದಕರ ಭಾವ ಮೂಡಿಸಿದೆ.