ಕಾರ್ಕಳ: ‘ಚೌಕಿದಾರ್ ಶೇರ್ ಹೇ’ ಸ್ಟಿಕ್ಕರ್ ಅಂಟಿಸಿದ ವಕೀಲನ ಕಾರು ವಶ
ಕಾರ್ಕಳ, ಎ. 5: ಕಾನೂನು ಬಾಹಿರವಾಗಿ ‘ಚೌಕಿದಾರ್ ಶೇರ್ ಹೇ’ ಎಂಬ ಸ್ಟಿಕ್ಕರ್ ಅಂಟಿಸಿದ ಕಾರ್ಕಳ ವಕೀಲನೊಬ್ಬನ ಕಾರನ್ನು ಚುನಾವಣಾಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದು, ಈ ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಕೀಲನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಕಳ ಅನಂತಶಯನ ಎಂಬಲ್ಲಿ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದು, ಈ ವೇಳೆ ಆಗಮಿಸಿದ ಕಾರ್ಕಳದ ವಕೀಲ ವಿಪುಲ್ ತೇಜ್ ಎಂಬಾತನ ಕಾರಿನ ಹಿಂಭಾಗ ಪೂರ್ತಿ ‘ಚೌಕಿದಾರ್ ಶೇರ್ ಹೇ’ ಎಂಬ ಸ್ಟಿಕ್ಕರ್ ಅಂಟಿಸಿರುವುದು ಕಂಡುಬಂತು. ಕೂಡಲೇ ಕಾರನ್ನು ತಡೆದ ಅಧಿಕಾರಿಗಳು ಸ್ಟಿಕ್ಕರನ್ನು ತೆರವುಗೊಳಿಸುಂತೆ ವಿಪುಲ್ ತೇಜ್ಗೆ ಸೂಚಿಸಿದರು.
ಆದರೆ ವಿಪುಲ್ ತೇಜ್ ಇದಕ್ಕೆ ನಿರಾಕರಿಸಿದ್ದಲ್ಲದೇ, ಅಧಿಕಾರಿಗಳನ್ನೇ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದು, ಈ ಬಗ್ಗೆ ಸೂಚನೆ ನೀಡಿದರೂ, ತೇಜ್ ಸ್ಟಿಕ್ಕರ್ ತೆಗೆಯಲು ನಿರಾಕರಿಸಿದನು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರನ್ನು ವಶ ಪಡಿಸಿಕೊಂಡು ಕಾರ್ಕಳ ನಗರ ಪೊಲೀಸರಿಗೆ ಒಪ್ಪಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ವಿಪುಲ್ ತೇಜ್ ವಿರುದ್ಧ ಅನುಮತಿ ಇಲ್ಲದ ಸ್ಟಿಕ್ಕರ್ ಅಂಟಿಸಿರುವ ಹಾಗೂ ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.