ಇಂಟೆಕ್ ಮುಖಂಡನಿಗೆ ಬಿಜೆಪಿಯವರಿಂದ ಹಲ್ಲೆ: ದೂರು
ಕೋಟ, ಎ.10: ಯುವ ಇಂಟೆಕ್ ಅಧ್ಯಕ್ಷ, ವಡ್ಡರ್ಸೆ ಯಳಹಕ್ಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ(26) ಎಂಬವರಿಗೆ ಆರ್ಎಸ್ಎಸ್ ಹಾಗೂ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಕಾವಡಿ ಗ್ರಾಮದ ಮಾನಂಬಳ್ಳಿ ಎಂಬಲ್ಲಿ ಎ.9ರಂದು ಮಧ್ಯರಾತ್ರಿ ವೇಳೆ ನಡೆದಿದೆ.
ಪರಿಚಯಸ್ಥರ ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದ ಅಜಿತ್ ಕುಮಾರ್ ಶೆಟ್ಟಿಗೆ ಹುಬ್ಬಳ್ಳಿ ಧಾರವಾಡದ ಆರ್ಎಸ್ಎಸ್ ಮುಖಂಡ ರತ್ನಾಕರ ಶೆಟ್ಟಿ, ಬಿಜೆಪಿ ತಾಪಂ ಸದಸ್ಯ ಗುಂಡು ಶೆಟ್ಟಿ, ಸುರೇಂದ್ರ ಶೆಟ್ಟಿ, ಅಂಬರೀಶ ಮಲ್ಯಾಡಿ ಹಾಗೂ ಇತರರು ಸೇರಿಕೊಂಡು ಏಕಾಏಕಿ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದರೆಂದು ದೂರಲಾಗಿದೆ.
‘ಮೂರು ದಿನದಲ್ಲಿ ನಿನ್ನನ್ನು ಮುಗಿಸದೇ ಇದ್ದರೆ ನನ್ನ ಹೆಸರು ರತ್ನಾಕರ ಶೆಟ್ಟಿಯೇ ಅಲ್ಲ. ಇವತ್ತೇ ಕೊನೆ ನೀನು ಯುವ ಇಂಟೆಕ್ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ತಾಪಂ ಸದಸ್ಯ ಗುಂಡು ಶೆಟ್ಟಿ ಜೊತೆ ಸುಮ್ಮನೆ ಇರು’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story