ಕುತ್ಪಾಡಿ ಎಸ್ಡಿಎಂ ಆಸ್ಪತ್ರೆಯಲ್ಲಿ ಬೊಜ್ಜು ನಿವಾರಣಾ ಶಿಬಿರ
ಉಡುಪಿ, ಎ.22:ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯಲ್ಲಿ ಪ್ರತಿವರ್ಷ ನಡೆಯುವ ಬೊಜ್ಜು ನಿವಾರಣೆ ಹಾಗೂ ಆರೋಗ್ಯ ಸಂರಕ್ಷಣಾ ಶಿಬಿರವು ಮೇ 6ರಿಂದ 13ರವರೆಗೆ ಒಂದು ವಾರ ಕಾಲ ಎಸ್ಡಿಎಂ ಆಸ್ಪತ್ರೆಯಲ್ಲಿ ನಡೆಯಲಿದ್ದು, ಶಿಬಿರಕ್ಕೆ ಹೊರ ರೋಗಿ ಮತ್ತು ಒಳರೋಗಿ ವಿಭಾಗಗಳೆರಡರ ಮೂಲಕವೂ ಪಾಲ್ಗೊಳ್ಳಬಹುದಾಗಿದೆ.
ಇಂದಿನ ಯಾಂತ್ರೀಕೃತ ಯುಗದಲ್ಲಿ ವ್ಯಕ್ತಿಯೊಬ್ಬ ವ್ಯಾಯಾಮದ ಕೊರತೆ, ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯಿಂದ ಬೆಳೆದ ಆಹಾರ ಸೇವನೆ, ಅನಿಯಮಿತ ಮತ್ತು ಅಸಂತುಲಿತ ಆಹಾರ ಕ್ರಮ, ಅಸಮರ್ಪಕ ಜೀವನ ಶೈಲಿಯಿಂದಾಗಿ ಅತಿಯಾದ ತೂಕವನ್ನು ಹೊಂದುತಿದ್ದಾನೆ. ಜೊತೆಗೆ ಅನೇಕ ರೀತಿಯ ವಿಷಕಾರಕ ಅಂಶಗಳು ನಮ್ಮ ದಿನ ನಿತ್ಯದ ಆಹಾರ ವಿಹಾರದಿಂದಾಗಿ ಸಣ್ಣ ಸಣ್ಣ ಪ್ರಮಾಣದಲ್ಲಿ ದೇಹವನ್ನು ಸೇರುತ್ತಿದ್ದು, ಇವು ಮುಂದೆ ಅನೇಕ ರೀತಿಯ ಖಾಯಿಲೆಗಳಿಗೆ ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯು ಈ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗಾಗಿ ದೂರವಾಣಿ ಸಂಖ್ಯೆ:0820-2533300,301,302,303ನ್ನು ಸಂಪರ್ಕಿಸ ಬಹುದು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.