ಕಲ್ಲಡ್ಕ: ಮನೆಗೆ ಬೆಂಕಿ; ಅಪಾರ ನಷ್ಟ
ಬಂಟ್ವಾಳ, ಎ. 22: ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಮನೆ ಭಾಗಶಃ ಸುಟ್ಟು ಭಸ್ಮವಾದ ಘಟನೆ ಕಲ್ಲಡ್ಕದಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಕಲ್ಲಡ್ಕ ಬಾಳ್ತಲಿ ಗ್ರಾಮದ ದಂಡೆಮಾರ್-ಕಲ್ಲಪಾಪು ಚಂದ್ರಶೇಖರ್ ನಾಯ್ಕ್ ಎಂಬವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ತಗಲಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ದೂರಲಾಗಿದೆ. ಚಂದ್ರಶೇಖರ ನಾಯ್ಕ್ ಹಾಗೂ ಅವರ ಮನೆಮಂದಿ ಸಂಬಂಧಿಕರ ಮದುವೆಗೆಂದು ಬ್ರಹ್ಮರಕೂಟ್ಲುವಿಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.
ಈ ಸಂದರ್ಭ ವಾಸದ ಮನೆ ಮತ್ತು ದಾಸ್ತಾನಿರಿಸಲಾಗಿದ್ದ ಸುಮಾರು 40 ಕ್ವಿಂಟಲ್ ಅಡಕೆ ಸುಟ್ಟು ಕರಕಲಾಗಿವೆ ಎಂದು ದೂರಲಾಗಿದೆ. ಬಂಟ್ವಾಳ ಅಗ್ನಿಶಾಮಕದಳದ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ತಹಶಿಲ್ದಾರ್ ಸಣ್ಣರಂಗಯ್ಯ ಭೇಟಿ ನೀಡಿದರು.
ತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮಿ ಗೋಪಾಲ, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ದೇವದಾಸ್ ಶೆಟ್ಟಿ, ದಿನೇಶ ಅಮ್ಟೂರು, ಶ್ರೀಕಾಂತ್ ಶೆಟ್ಟಿ, ಶೋಬಿತ್ ಪೂಂಜ, ಆನಂದ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.