ಮಣಿಪಾಲ: ಹಿರಿಯ ನಾಗರಿಕರ ಚಿಕಿತ್ಸಾಲಯ ದ್ರಾವಿಡ್ ಉದ್ಘಾಟನೆ
ಮಣಿಪಾಲ, ಎ.23: ಮಣಿಪಾಲ ಆಸ್ಪತ್ರೆಗಳ ಪ್ರಚಾರ ರಾಯಭಾರಿ ಯಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಮಂಗಳವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕ ಚಿಕಿತ್ಸಾಲಯ ಹಾಗೂ ಭ್ರೂಣಶಿಶು ಔಷಧ ವಿಭಾಗವನ್ನು ಉದ್ಘಾಟಿಸಿದರು.
ಎರಡೂ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ದ್ರಾವಿಡ್, ಇಂದು ವಿಜ್ಞಾನ ಹಾಗೂ ವೈದ್ಯಕೀಯ ಆರೈಕೆಯಲ್ಲಿ ಭಾರೀ ಪ್ರಗತಿ ಸಾಧಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ಸಹಾಯವಾಗಲಿದೆ. ಮಣಿಪಾಲ ಸಮೂಹವು ತನ್ನ ಸಂಶೋಧನಾ ಚಟುವಟಿಕೆಗಳಿಗೆ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿಗೆ ಹೆಸರಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಣಿಪಾಲ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭ್ರೂಣ ಮಟ್ಟದಿಂದ ವಯಸ್ಸಾದ ಎಲ್ಲರಿಗೂ ಮಣಿಪಾಲದಲ್ಲಿ ಎಲ್ಲಾ ರೀತಿು ಸೌಕರ್ಯಗಳು ಲಭ್ಯವಿದೆ ಎಂದರು.
ಕೆಎಂಸಿಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಹಂದೆ ಅವರು ‘ಸಮಗ್ರ ಹಿರಿಯ ನಾಗರಿಕರ ಚಿಕಿತ್ಸಾಲಯ’ದ ಬಗ್ಗೆ ಹಾಗೂ ಸ್ತ್ರೀರೋಗ ವಿಭಾಗದ ಘಟಕ ಮುಖ್ಯಸ್ಥರಾದ ಡಾ. ಅಖಿಲ ವಾಸುದೇವ ಅವರು ಭ್ರೂಣ ಔಷಧ ವಿಭಾಗದ ಬಗ್ಗೆ ವಿವರಿಸಿದರು. ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅವರು ವಂದಿಸಿದರು.