ಮುಡಿಪು: ಲಾರಿ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಮೃತ್ಯು
ಬಂಟ್ವಾಳ, ಎ. 25 : ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮುಡಿಪು ವ್ಯಾಪ್ತಿಯ ಮೂಳೂರು ಎಂಬಲ್ಲಿ ಗುರುವಾರ ಸಂಭವಿಸಿದೆ.
ಮೃತರನ್ನು ಮಂಚಿ ಗ್ರಾಮದ ಕಯ್ಯೂರು ನಿವಾಸಿ ಅದ್ರಾಮ ಬ್ಯಾರಿ ಎಂಬವರ ಪುತ್ರ ಮುಹಮ್ಮದ್ ಸಿನಾನ್ (20) ಎಂದು ಗುರುತಿಸಲಾಗಿದ್ದು, ಝಹೀರ್ ಗಾಯಗೊಂಡ ಸಹ ಸವಾರ. ಝಹೀರ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಸಿನಾನ್ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ
ಇಂದು ಸಂಜೆ ಸಿನಾನ್ ಅವರು ತನ್ನ ಸ್ನೇಹಿತ ಝಹೀರ್ ಅವರ ಜೊತೆ ಮುಡಿಪು ವ್ಯಾಪ್ತಿಯ ಮೂಳೂರಿನಿಂದ ಮಂಚಿ ಕಡೆಗೆ ಬರುತ್ತಿದ್ದಾಗ ಮೂಳೂರಿನ ಅಲ್ಪ ದೂರದಲ್ಲಿ ಟಿಪ್ಪರ್ ಲಾರಿಯು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಇವರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ಸಹಕಾರದೊಂದಿಗೆ ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಸಿನಾನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಝಹೀರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ದ್ವಿಚಕ್ರ ವಾಹನ ನಜ್ಜುಗುಜ್ಜಾಗಿದೆ. ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ.