ಫರಂಗಿಪೇಟೆ: ರೈಲ್ವೇ ಲೆವೆಲ್ ಕ್ರಾಸಿಂಗ್ ವಿವಾದ; ಗ್ರಾಮಸ್ಥರಿಂದ ಪ್ರತಿಭಟನೆ
ಫರಂಗಿಪೇಟೆ, ಮೇ 2: ಕುಂಪನಮಜಲ್ ರೈಲ್ವೇ ಲೆವೆಲ್ ಕ್ರಾಸಿಂಗ್ ರಸ್ತೆಯನ್ನು ಇಂದು ಶಾಶ್ವತ ಮುಚ್ಚಲು ಪ್ರಯತ್ನಿಸಿದ ರೈಲ್ವೇ ಇಲಾಖೆಯ ಕ್ರಮವನ್ನು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೈಲ್ವೇ ಅಧಿಕಾರಿಗಳು ವಾಪಸಾದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.
ಲೆವೆಲ್ ಕ್ರಾಸಿಂಗ್ ದುರಸ್ಥಿಗೋಳಿಸಲು ತಾತ್ಕಾಲಿಕವಾಗಿ ರಸ್ತೆಯನ್ನು ಮುಚ್ಚಲಾಗಿದೆ. ಸಂಚಾರಕ್ಕಾಗಿ ಬದಲಿ ರಸ್ತೆಯನ್ನು ಉಪಯೋಗಿಸಿ ಎಂಬ ಸೂಚನಾ ಫಲಕ ಹಾಕಿ ಕಾಮಗಾರಿ ಪ್ರಾರಂಭಿಸಿದ್ದು ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಲ್ಲಿ ವಿಚಾರಿಸಿದಾಗ ದುರಸ್ಥಿಗೊಳಿಸಿ ಮೂರು ದಿವಸದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿ ಹತ್ತು ದಿವಸ ಕಳೆದರೂ ಸಂಚಾರಕ್ಕೆ ಅವಕಾಶ ನೀಡದೇ ಇಂದು ರೈಲ್ವೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಲೆವೆಲ್ ಕ್ರಾಸಿಂಗ್ ಶಾಶ್ವತ ಮುಚ್ಚಲು ಪ್ರಯತ್ನಿಸಿದಾಗ ಲೆವೆಲ್ ಕ್ರಾಸಿಂಗ್ ಬಳಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು.
ರೈಲ್ವೇ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವ ಯುಟಿ ಖಾದರ್ ಜಿಲ್ಲಾಧಿಕಾರಿ ರೈಲ್ವೇ ಅಧಿಕಾರಿಗಳು ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನದವರೆಗೆ ಯಥಾಸ್ಥಿತಿ (ಬದಲಿ ರಸ್ತೆ ಉಪಯೂಗಿಸುವಂತೆ) ತೀರ್ಮಾನಿಸಲಾಯಿತು.
ಜನರ ಬೇಡಿಕೆಗೆ ವಿರುದ್ಧ ವಾಗಿ ರೈಲ್ವೇ ಇಲಾಖೆ ತೀರ್ಮಾನ ಕೈಗೊಂಡರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಹೊರಾಟ ಸಮಿತಿ ರಚಿಸಿ ಗ್ರಾಮಸ್ಥರೊಂದಿಗೆ ಸೇರಿ ರೈಲ್ವೇ ರೋಖೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ ಜಿಲ್ಲಾ ಪಂ ಮಾಜಿ ಸದಸ್ಯ ಉಮರ್ ಫಾರೂಕು ತಿಳಿಸಿದ್ದಾರೆ.
ಪುದು ಗ್ರಾಪಂ ಅದ್ಯಕ್ಷ ರಮ್ವಾನ್, ಅರಫಾ ಮಸೀದಿ ಕುಂಪನಂಜಲ್ ಅಧ್ಯಕ್ಷ ಬುಕಾರಿ, ಪಿ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸೆಲೀಮ್ ಕುಂಪನಮಜಲ್, ಪಂಚಾಯತ್ ಸದಸ್ಯರಾದ ರಿಯಾಝ್, ನಝೀರ್, ಝಾಹಿರ್, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ, ಎಫ್ ಎ ಕಾದರ್, ಎಸ್ಡಿಪಿಐ ಮುಖಂಡರಾದ ಸುಲೈಮಾನ್ ಉಸ್ತಾದ್, ಇಕ್ಬಾಲ್ ಅಮೆಮಾರ್, ಸೀತರಾಮ ಕುಂಪನಮಜಲ್, ಆನಂದ್ ಆಳ್ವ, ಸನ್ವೇಶ್ವರ, ಗಿರೀಶ, ಸುಂದರ ಶೆಟ್ಟಿ ಕಲ್ಲತ್ತಡಮೆ, ಆನಂದ್ ಆಳ್ವ , ಬಿಜೆಪಿ ಮುಖಂಡ ಲಕ್ಷಣ, ಚಂದ್ರಶೇಕರ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.