ಕಡಬ ಗೃಹ ರಕ್ಷಕ ದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಭೇಟಿ
ಕಡಬ, ಮೇ 12: ಇಲ್ಲಿನ ಗೃಹ ರಕ್ಷಕ ದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಮುರಳಿಮೋಹನ ಚೂಂತಾರು ರವಿವಾರ ಭೇಟಿ ನೀಡಿ ಪ್ರಕೃತಿ ವಿಕೋಪದ ಸಂದರ್ಭ ಅದನ್ನು ನಿಭಾಯಿಸುವ ಬಗ್ಗೆ ಗೃಹ ರಕ್ಷಕ ದಳದ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು.
ಕಡಬ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಪ್ಲಟೂನು ಸಾರ್ಜಂಟ್ ತೀರ್ಥೆಶ್ ಅಮೈ ಗೌರವ ವಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಕಮಾಂಡೆಂಟ್ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಗೃಹರಕ್ಷಕದಳದ ಸಿಬ್ಬಂದಿ ವರ್ಗವು ಕಾರ್ಯಾಚರಣೆ ಚುರುಕುಗೊಳಿಸಬೇಕು, ಕಳೆದ ಬಾರಿ ಅವಘಡಗಳು ನಡೆದಿದ್ದ ಸ್ಥಳಗಳನ್ನು ಗುರುತಿಸಿ ವರದಿ ಸಲ್ಲಿಸಬೇಕು, ಅಗತ್ಯವಿರುವ ಸಲಕರಣೆಗಳನ್ನು ಪಡೆದುಕೊಳ್ಳಬೇಕು ಎಂದಯ ಸೂಚಿಸಿದರು.
ಈಗಾಗಲೇ ಜಾಕೆಟ್, ವಿದ್ಯುತ್ ದೀಪ ಸಹಿತ ಕೆಲವು ವಸ್ತುಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಟ್ರಿ ಕಟ್ಟಿಂಗ್ ಮೆಷಿನ್ ನೀಡಲಾಗು ವುದು. ಕಳೆದ ಬಾರಿ ಹೊಸಮಠ, ನೆಟ್ಟಣಗಳಲ್ಲಿ ಸೇತುವೆ ಮುಳುಗಡೆಯಾಗಿತ್ತು. ಆದರೆ ಈ ಬಾರಿ ಹೊಸ ಸೇತುವೆ ನಿರ್ಮಾಣ ಆಗಿರುವು ದರಿಂದ ಸಮಸ್ಯೆ ಉದ್ಭವ ಆಗುವ ಸಾಧ್ಯತೆ ಇಲ್ಲ. ಆದರೂ ಗೃಹ ರಕ್ಷಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸಬೇಕು ಎಂದು ಮುರಳಿ ಮೋಹನ ಚೂಂತಾರು ಹೇಳಿದರು.
ಈ ಸಂದರ್ಭ ಗೃಹ ರಕ್ಷಕರಾದ ಉದಯ ಶಂಕರ್, ಸುಂದರ ಪಾಲೋಲಿ ಸಹಿತ ಸುಮಾರು 25 ಗೃಹರಕ್ಷಕರು ಉಪಸ್ಥಿತರಿದ್ದರು.