ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ದೇವೇಗೌಡರು
ಅಂಬಲಪಾಡಿ ದೇವಕ್ಕೆ ಭೇಟಿ; ಶೃಂಗೇರಿಗೆ ನಿರ್ಗಮನ
ಉಡುಪಿ, ಮೇ 15: ಕಳೆದ ಒಂದು ವಾರದಿಂದ ಕಾಪು ಸಮೀಪದ ಮುಳೂರಿನ ಖಾಸಗಿ ರೆಸಾರ್ಟ್ನಲ್ಲಿ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಗಾಗಿ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಳೆದ ಎರಡು-ಮೂರು ದಿನಗಳಲ್ಲಿ ಕರಾವಳಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದಕ್ಕೆ ಆದ್ಯತೆ ನೀಡಿದ್ದು, ಇಂದು ಸಂಜೆ ಚಿಕಿತ್ಸೆ ಮುಗಿಸಿ ಶೃಂಗೇರಿಗೆ ನಿರ್ಗಮಿಸಿದ್ದಾರೆ.
ಈಗಾಗಲೇ ಕೋಟದ ಅಮೃತೇಶ್ವರಿ, ಕಾಪು ಸಮೀಪದ ಜಲಂಚಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವ ದೇವೇಗೌಡ ದಂಪತಿಗಳು, ನಿನ್ನೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಪೇಜಾವರಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದರು.
ಇಂದು ಪತ್ನಿ ಚೆನ್ನಮ್ಮ ಅವರ ಒತ್ತಾಯದ ಮೇರೆ ಉಡುಪಿಯ ಪ್ರಸಿದ್ಧ ಶಕ್ತಿ ಕ್ಷೇತ್ರ ಎನಿಸಿರುವ ಅಂಬಲಪಾಡಿಯ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಚೆನ್ನಮ್ಮ ನಿನ್ನೆ ದೇವಸ್ಥಾನಕ್ಕೆ ಭೇಟಿ ನೀಡಿ, ಇಲ್ಲಿ ಸರ್ವ ಕುಟುಂಬ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದರು. ಅವರ ಒತ್ತಾಯದಂತೆ ಇಂದು ದೇವೇಗೌಡರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 11:45ಕ್ಕೆ ಗೌಡರು ದೇವಾಲಯಕ್ಕೆ ಆಗಮಿಸಿದಾಗ, ದೇವಳದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಹೂವಿನ ಮಾಲೆ ಹಾಕಿ ಸ್ವಾಗತಿಸಿದರು. ಶ್ರೀ ಜರ್ನಾದನ ದೇವಳಕ್ಕೆ ಪ್ರವೇಶಿಸುವ ಮುನ್ನವೇ ದೇವಳದ ಇತಿಹಾಸ ಕೇಳಿದ ಗೌಡರು, ದೇವರಿಗೆ ನಮಸ್ಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಳಕ್ಕೆ ಒಂದು ಸುತ್ತು ಹಾಕಿ ಮಹಾಕಾಳಿ ಗುಡಿಯತ್ತ ತೆರಳಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, 15 ನಿಮಿಷಕ್ಕೂ ಅಧಿಕ ಕಾಲ ದೇವರು ಎದುರು ನಿಂತು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅವರು ನಿಮ್ಮ ಕುಟುಂಬಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ, ದೇವೇಗೌರಿಗೆ ದೇವರ ಪ್ರಸಾದ ನೀಡಿದರು.
ಮೇ 24ಕ್ಕೆ ಸರ್ವಪೂಜೆ: ದೇವಳದಲ್ಲಿ ನಡೆಯುವ ಪೂಜೆ, ವಿಶೇಷ ಕಾರ್ಯಕ್ರಮ, ಭಕ್ತರು ಕೊಡುವ ಸೇವೆಗಳ ಬಗ್ಗೆ ಧರ್ಮದರ್ಶಿಗಳಿಂದ ಮಾಹಿತಿ ಪಡೆದ ಗೌಡರು, ಮೇ 24 ಕ್ಕೆ ಎಚ್.ಡಿ.ದೇವೇಗೌಡ ಮತ್ತು ಚೆನ್ನಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಸರ್ವಪೂಜೆ ನಡೆಸುವಂತೆ 250 ರೂ. ಕೊಟ್ಟು ರಶೀದಿ ಪಡೆದುಕೊಂಡರು.
ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ್ ರಾವ್, ಮಾಧ್ಯಮ ವಕ್ತಾರ ಪ್ರದೀಪ್ ಜಿ. ಉಪಸ್ಥಿತರಿದ್ದರು.
ಶೃಂಗೇರಿಗೆ ಪ್ರಯಾಣ: ಒಂದು ವಾರ ಮೂಳೂರಿನ ಸಾಯಿರಾಧ ಹೆರಿಟೇಜ್ನಲ್ಲಿ ಆಯುರ್ವೇದ ತಜ್ಞ ಡಾ.ತನ್ಮಯ ಗೋಸ್ವಾಮಿ ನೇತೃತ್ವದಲ್ಲಿ ಪಂಚಕರ್ಮ ಚಿಕಿತ್ಸೆ ಹಾಗೂ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದಿರುವ ದೇವೇಗೌಡ ಇದೀಗ ಲವಲವಿಕೆಯಿಂದಿದ್ದು, ಇಂದು ಸಂಜೆ ಮೂಳೂರಿನಿಂದ ಶೃಂಗೇರಿಗೆ ನಿರ್ಗಮಿಸಿದರು. ಇದಕ್ಕೆ ಮುನ್ನ ಚೆನ್ನಮ್ಮ ಸಹ ಇಲ್ಲಿಂದ ತೆರಳಿದ್ದರು.
ದೇವೇಗೌಡರು ನಾಳೆ ಧರ್ಮಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಆ ಬಳಿಕ ಬೆಂಗಳೂರಿಗೆ ತೆರಳುವರು ಎಂದು ತಿಳಿದುಬಂದಿದೆ.