ಮಹಿಳೆಯ ಬರ್ಬರ ಹತ್ಯೆ ಪ್ರಕರಣ: ವಿಕ್ಟೋರಿಯಾಗೆ ನ್ಯಾಯಾಂಗ ಬಂಧನ
ಮಂಗಳೂರು, ಮೇ 16: ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ (35) ಕೊಲೆ ಪ್ರಕರಣದಲ್ಲಿ ಬಂಧಿತ ಎರಡನೇ ಆರೋಪಿ ವಿಕ್ಟೋರಿಯಾ ಮಥಾಯಿಸ್ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಗೆ ಮೇ 29ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಮುಖ ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ (36) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿ ಗುಣಮುಖನಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ನೀಡಿದ ಹೇಳಿಕೆಯ ಪ್ರಕಾರ ಆತನಿಂದ ಕೆಲವೊಂದು ಸೊತ್ತುಗಳನ್ನು ವಶಪಡಿಸಿಕೊಳ್ಳಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ರಿ ಪೊಲೀಸರಿಂದ ತನಿಖೆ: ಶ್ರೀಮತಿ ಶೆಟ್ಟಿಯ ರುಂಡ, ಕಾಲು ಪತ್ತೆಯಾಗಿರುವ ಸ್ಥಳ ಕದ್ರಿ (ಮಂಗಳೂರು ಪೂರ್ವ) ಠಾಣೆಗೆ ಸೇರಿದೆ. ಮೇ 12ರಂದು ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಅಪರಾಧ ಪತ್ತೆ ದಳದ ಪೊಲೀಸರು ಕದ್ರಿ ಪೊಲೀಸರ ಜತೆಗೂಡಿ ಆರೋಪಿಗಳನ್ನು ಪತ್ತೆ ಮಾಡಿ ಕೊಟ್ಟಿದ್ದು, ಮುಂದಿನ ತನಿಖೆಯನ್ನು ಕದ್ರಿ ಪೊಲೀಸರು ನಡೆಸಲಿದ್ದು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಿದ್ದಾರೆ.