ಸಮುದ್ರದಲ್ಲಿ ಮುಳುಗಿ ಸಾಪ್ಟ್ವೇರ್ ಇಂಜಿನಿಯರ್ ಮೃತ್ಯು
ಕೋಟ, ಮೇ 18: ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದ ಸಾಪ್ಟ್ವೇರ್ ಇಂಜಿನಿಯರ್ ತನ್ನ ಸಹಪಾಠಿಗಳೊಂದಿಗೆ ಸಮುದ್ರದಲ್ಲಿ ಆಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತೆಕ್ಕಟ್ಟೆ ಗ್ರಾಮದ ಕೊಮೆ ಎಂಬಲ್ಲಿ ಎ.17ರಂದು ಸಂಜೆ 4ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಬೆಂಗಳೂರಿನ ಬಸವನಗುಡಿಯ ಶಶಿಕಲಾ ಎ.ಎಸ್. ಎಂಬವರ ಮಗ ಸುಜಿತ್ ಕುಮಾರ್ ಎನ್.(26) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಖಾಸಗಿ ಸಾಪ್ಟ್ವೇರ್ ಕಂಪೆನಿಯಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದರು.
ಇವರು ತನ್ನ ಸಹಪಾಠಿ ರಂಜನ್ ಎಂಬವರ ಅಣ್ಣನ ಮದುವೆ ಕಾರ್ಯ ಕ್ರಮಕ್ಕೆಂದು ಬೆಂಗಳೂರಿನಿಂದ ಸ್ನೇಹಿತರಾದ ನಿಖಿಲ್, ಕಿಶನ್, ಅಮರೇಶ್, ಸುಕ್ರುತ್ ಹಾಗೂ ಇತರರೊಂದಿಗೆ ಮಂಜೇಶ್ವರಕ್ಕೆ ಮೇ 16ರಂದು ಬಂದಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ಆನ್ಲೈನ್ ಬುಕ್ಕಿಂಗ್ ಮಾಡಿದ್ದ ತೆಕ್ಕಟ್ಟೆ ಗ್ರಾಮದ ಕೊಮೆಯ ವೇವ್ಸ್ ಬೀಚ್ ಹೌಸ್ಗೆ ಮೇ 17ರಂದು ಮಧ್ಯಾಹ್ನ 3:45 ಗಂಟೆಗೆ ಬಂದಿದ್ದರು.
ಅಲ್ಲಿ ನಾಲ್ಕು ಗಂಟೆ ಸುಮಾರಿಗೆ ಇವರೆಲ್ಲ ಸಮುದ್ರದ ನೀರಿಗೆ ಇಳಿದು ಆಟ ಆಡುತ್ತಿದ್ದರೆನ್ನಲಾಗಿದೆ. ಈ ವೇಳೆ ಸುಜಿತ್ ಕುಮಾರ್ಗೆ ಸಮುದ್ರದ ಅಲೆಯು ಅಪ್ಪಳಿಸಿದ್ದು, ಇದರಿಂದ ಆಯತಪ್ಪಿದ ಅವರು ನೀರಿನಲ್ಲಿ ಮುಳುಗಿ ದರು. ಇವರೊಂದಿಗೆ ಸುಕ್ರುತ್ ಎಂಬವರು ನೀರಿನಲ್ಲಿ ಮುಳುಗಿದರೆನ್ನಲಾಗಿದೆ. ಕೂಡಲೇ ಸ್ಥಳೀಯರು ಸಮುದ್ರಕ್ಕೆ ಹಾರಿ ಸುಕ್ರುತ್ ಅವರನ್ನು ರಕ್ಷಿಸಿದರು.
ಆದರೆ ಸುಜಿತ್ ಕುಮಾರ್ ನೀರಿನಲ್ಲಿ ಮುಳುಗಿ ಮೃತಪಟ್ಟರು. ಬಳಿಕ ಸುಮಾರು 70 ಮೀಟರ್ ದೂರದ ಸಮುದ್ರದಲ್ಲಿ ಸುಜಿತ್ ಮೃತದೇಹ ಪತ್ತೆ ಯಾಯಿತು. ಅಸ್ವಸ್ಥಗೊಂಡಿರುವ ಸುಕ್ರುತ್ ಕುಂದಾಪುರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.