ಬೋರ್ವೆಲ್ ಗುತ್ತಿಗೆದಾರನ ಮೇಲೆ ಹಲ್ಲೆ : 6 ಜನರ ವಿರುದ್ಧ ಕೇಸು
ಮೂಡುಬಿದಿರೆ : ಇಲ್ಲಿನ ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ ಹಂಡೇಲು ಶಾಲೆ ಬಳಿ ಜಿ.ಪಂನ ಟಾಕ್ಪೋರ್ಸ್ ಅನುದಾನದಲ್ಲಿ ನಡೆಯುತ್ತಿದ್ದ ಬೋರ್ವೆಲ್ ಕಾಮಗಾರಿಯ ಮೇಲ್ವೀಚಾಚರಣೆ ನಡೆಸುತ್ತಿದ್ದ ಪಂಚಾಯತ್ನ ಮಾಜಿ ಅಧ್ಯಕ್ಷ, ಪ್ರಸ್ತುತ ಕೊಳವೆ ಬಾವಿ ದುರಸ್ಥಿದಾರ ಉಮಾನಾಥ ಕರ್ಕೇರಾ ಅವರಿಗೆ ಆರು ಜನ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದ್ದು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂನ ವತಿಯಿಂದ ಹಂಡೇಲು ಶಾಲೆ ಬಳಿ ಇರುವ ಸರಕಾರಿ ಜಾಗದಲ್ಲಿ ಬೋರ್ವೆಲ್ ಕಾಮಗಾರಿ ನಡೆಯುತ್ತಿದ್ದು ನೀರು ಸಿಕ್ಕದಾಗ ರಾತ್ರಿ 10.30ರ ವೇಳೆಗೆ ಕೆಲಸ ನಿಲ್ಲಿಸಿ ಉಮಾನಾಥ ಕರ್ಕೇರಾ ಅವರು ಮನೆಗೆ ಹೊರಟಿದ್ದರು.
ಈ ಸಂದರ್ಭದಲ್ಲಿ ಜಮೀನು ಬಳಿಯ ಭಾಸ್ಕರ್ ಕೋಟ್ಯಾನ್, ಸತೀಶ್ ಕೋಟ್ಯಾನ್, ಮನೋಹರ ನಾಯಕ್, ಶರತ್ ಬೆಳುವಾಯಿ, ಮನೋಜ್, ಅಶಿಕ್ ಲಾಡಿ ಸೇರಿಕೊಂಡು ಉಮಾನಾಥ ಕರ್ಕೇರಾ ಅವರ ಕೈಗೆ ಹೊಡೆದು, ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದು ತಡೆಯಲು ಬಂದ ಗ್ರಾ.ಪಂ ಸದಸ್ಯ ದಿನೇಶ್ ಗೌಡ ಮತ್ತು ಅವರ ಸ್ನೇಹಿತ ಕಿಶೋರ್ ನಾಯ್ಕ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿದ್ದಾರೆ.
ಈ ಬಗ್ಗೆ ಉಮಾನಾಥ ಕರ್ಕೇರಾ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕಿ ಸಾವಿತ್ರಿ ನಾೈಕ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.