ಕಾರು ಹೊಂಡಕ್ಕೆ ಬಿದ್ದು ಯಕ್ಷಗಾನ ಕಲಾವಿದ ಗಾಯ
ಪುತ್ತೂರು : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮವಾಗಿ ಖ್ಯಾತ ಯಕ್ಷಗಾನ ಕಲಾವಿದ ಪದ್ಯಾಣ ಗಣಪತಿ ಭಟ್ ದಂಪತಿ ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ತಿಂಗಳಾಡಿ ಸಮೀಪದ ತ್ಯಾಗರಾಜೆ ಎಂಡೆಸಾಗು ಎಂಬಲ್ಲಿ ಪುತ್ತೂರು-ಬೆಳ್ಳಾರೆ ರಸ್ತೆಯಲ್ಲಿ ಸಂಭವಿಸಿದೆ.
ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತ, ಪ್ರಸ್ತುತ ಹನುಮಗಿರಿ ಕೋಡಂಡರಾಮ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದ ಪದ್ಯಾಣ ಗಣಪತಿ ಭಟ್ ಮತ್ತು ಅವರ ಪತ್ನಿ ಶೀಲಾ ಶಂಕರಿ ಗಾಯಗೊಂಡವರು. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದು ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಯ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿಗೆ ಕರೆದೊಯ್ಯು ಅಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಪದ್ಯಾಣ ಗಣಪತಿ ಭಟ್ ಅವರು ಪುತ್ತೂರಿನಿಂದ ಬೆಳ್ಳಾರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕ್ವಿಡ್ ಕಾರು ತ್ಯಾಗರಾಜೆ ಎಂಡೆಸಾಗು ತಿರುವು ರಸ್ತೆಯ ಬಳಿ ಹತೋಟಿ ಕಳಕೊಂಡು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿರುವುದಾಗಿ ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಲ್ಮಡ್ಕದಲ್ಲಿ ನೆಲೆಸಿರುವ ಪದ್ಯಾಣ ಗಣಪತಿ ಭಟ್ ಅವರು ತನ್ನ ಪತ್ನಿಯೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.