ಕಡಿಯಾಳಿ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಉದ್ಘಾಟನೆ
ಉಡುಪಿ, ಮೇ 19: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಡಿಯಾಳಿ ನಿವಾಸಿ ಜಲಜಾ ಶೇರಿಗಾರ್ತಿ ಎಂಬವರ ಮನೆಗೆ ಕಲ್ಪಿಸಲಾದ ಉಚಿತ ವಿದ್ಯುತ್ ಸಂಪರ್ಕವನ್ನು ಉಡುಪಿ ಶಾಸಕ ರಘುಪತಿ ಭಟ್ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮೂಲಕ ಎಲ್ಲಾ ಗಣೇಶೋತ್ಸವ ಸಮಿತಿಗಳಿಗೆ ಕಡಿಯಾಳಿ ಗಣೇಶೋತ್ಸವ ಮಾದರಿಯಾಗಿದೆ. ಉಡುಪಿ ಜಿಲ್ಲೆಯ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವಾಗಿರುವ ಕಡಿಯಾಳಿಯ ಈ ಮಂಡಳಿ ಆಸರೆ ಯೋಜನೆ, ಬಡವರಿಗೆ ಮನೆ ಕಟ್ಟಿಕೊಡುವುದು, ಆರೋಗ್ಯ ಯೋಜನೆ, ವಿದ್ಯಾರ್ಥಿ ವೇತನ ಇಂತಹ ಸಾಮಾಜಿಕ ಚಟುವಟಿಕೆಗಳು ಮತ್ತಷ್ಟು ಸಮಿತಿ ಗಳಿಗೆ ಪ್ರೇರಣೆ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ ಭಟ್, ಕೋಶಾಧಿ ಕಾರಿ ಎಂ.ವಲ್ಲಭ ಭಟ್, ಸಮಿತಿಯ ಪದಾಧಿಕಾರಿಗಳಾದ ಸತೀಶ್ ಕುಲಾಲ್ ಕಡಿಯಾಳಿ, ಮಂಜುನಾಥ್ ಹೆಬ್ಬಾರ್, ಸಂತೋಷ ಕಿಣಿ, ಮುರಳೀಧರ್ ಪೈ, ಕೆ.ಹರೀಶ್ ಕುಮಾರ್, ಸಂದೀಪ್ ಸನಿಲ್ ಕಡಿಯಾಳಿ, ಕಡಿಯಾಳಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಸದಾನಂದ ಶರ್ಮ ಉಪಸ್ಥಿತರಿದ್ದರು.
ಕಡಿಯಾಳಿ ನಗರಸಭಾ ಸದಸ್ಯೆ ಗೀತಾ ಶೇಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕುಮಾರ್ ವಂದಿಸಿದರು.