ಯುವಕನ ಮೇಲೆ ತಂಡದಿಂದ ಹಲ್ಲೆ: ದೂರು ದಾಖಲು
ಪುತ್ತೂರು: ಯುವಕನೊಬ್ಬನನ್ನು ತಂಡವೊಂದು ತಡೆದು ನಿಲ್ಲಿಸಿ,ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಬ್ಬಿಣದ ರಾಡ್ನಿಂದ ಹೊಡೆದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಹಾಗೂ ತಡೆಯಲು ಬಂದ ವ್ಯಕ್ತಿಯೊಬ್ಬರ ಮೇಲೂ ತಂಡ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಗುಂಪಕಲ್ಲು ನಿವಾಸಿ ಅಬ್ದುಲ್ ಸತ್ತಾರ್ ಅವರ ಪುತ್ರ ಮಹಮ್ಮದ್ ಸಾದಿಕ್ (21) ಹಲ್ಲೆಗೊಳಗಾದವರು. ಹಲ್ಲೆಗೊಳಗಾದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಅದ್ದು ಪಡೀಲ್, ಇರ್ಷಾದ್ ಪೋಳ್ಯ,ಇಲ್ಯಾಸ್ ಪೋಳ್ಯ, ಇಕ್ಬಾಲ್ ಪೋಳ್ಯ, ಸಂಶುದ್ದೀನ್ ಪೋಳ್ಯ, ಇಕ್ಬಾಲ್ ಸಾಮೆತ್ತಡ್ಕ, ರಫೀಕ್ ಸಾಮೆತ್ತಡ್ಕ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ ವೇಳೆ ತಡೆಯಲು ಬಂದ ಅತಾವುಲ್ಲ ಎಂಬಾತನ ಮೇಲೂ ಆರೋಪಿಗಳು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳು ವಿರುದ್ದವೂ ಕೇಸು
ಈ ಹಲ್ಲೆ ಘಟನೆಗೆ ಮುನ್ನ ಮಹಮ್ಮದ್ ಸಾದಿಕ್ ಅವರು ಚಿಕ್ಕಮುಡ್ನೂರು ಗ್ರಾಮದ ಕರೆಮೂಲೆ ನಿವಾಸಿ ಅತಾವುಲ್ಲ ಎಂಬವರ ಜತೆ ಸೇರಿಕೊಂಡು ಸಾಮೆತ್ತಡ್ಕದಲ್ಲಿರುವ ಇಬ್ರಾಹಿಂ ಎಂಬವರ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಮ್ಮದ್ ಸಾದಿಕ್ ವಿರುದ್ದವೂ ದೂರು ನೀಡಲಾಗಿದೆ.
ಪೊಲೀಸರು ಇತ್ತಂಡದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.