ಹಂದಿಗೆ ಢಿಕ್ಕಿ ಹೊಡೆದು ಅಪಘಾತ: ಕಾರು ಚಾಲಕ ಮೃತ್ಯು
ಬೈಂದೂರು, ಮೇ 26: ರಸ್ತೆಗೆ ಅಡ್ಡ ಬಂದ ಹಂದಿಗೆ ಢಿಕ್ಕಿ ಹೊಡೆದ ಕಾರೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಗೋಳಿಹೊಳೆ ಗ್ರಾಮದ ಹಿಲ್ಗಾರ್ ಸಮೀಪ ಮೇ 25ರಂದು ರಾತ್ರಿ 11.30ರ ಸುಮಾರಿಗೆ ನಡೆದಿದೆ.
ಮೃತರನ್ನು ಕಾಲ್ತೋಡು ನಿವಾಸಿ ಚಂದ್ರಶೇಖರ ಶೆಟ್ಟಿ(53) ಎಂದು ಗುರುತಿಸಲಾಗಿದೆ. ಕೊಲ್ಲೂರು ಸಮೀಪ ಹೊಟೇಲ್ ನಡೆಸುತ್ತಿದ್ದ ಇವರು ರಾತ್ರಿ ವ್ಯವಹಾರ ಮುಗಿಸಿ ಮನೆಗೆ ತನ್ನ ಕ್ವಿಡ್ ಕಾರಿನಲ್ಲಿ ಹೊರಟಿದ್ದರು. ಗೋಳಿಹೊಳೆ ಮೂರು ಕೈ ಕಡೆಯಿಂದ ಕಾಲ್ತೋಡು ಕಡೆಗೆ ಹೋಗುತ್ತಿದ್ದಾಗ ಕಾರಿಗೆ ಹಂದಿಯೊಂದು ಅಡ್ಡ ಬಂತೆನ್ನಲಾಗಿದೆ. ಹಂದಿಯನ್ನು ತಪ್ಪಿಸುವ ಭರದಲ್ಲಿ ಹಂದಿಗೆ ಢಿಕ್ಕಿ ಹೊಡೆದ ಕಾರು ನಂತರ ನಿಯಂತ್ರಣ ತಪ್ಪಿ ರಸ್ತೆಬದಿಯ ಕಲ್ಲು ರಾಶಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಚಂದ್ರಶೇಖರ್ ಶೆಟ್ಟಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ರಸ್ತೆಗೆ ಅಡ್ಡ ಬಂದ ಹಂದಿ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.