ಸರಣಿ ಅಪಘಾತ: ರಿಕ್ಷಾದಲ್ಲಿದ್ದ ಮಹಿಳೆ ಮೃತ್ಯು
ಹಿರಿಯಡ್ಕ, ಮೇ 28: ಇಲ್ಲಿಗೆ ಸಮೀಪದ ಓಂತಿಬೆಟ್ಟು ಎಂಬಲ್ಲಿ ಇಂದು ಸಂಜೆ 4:30ರ ಸುಮಾರಿಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಲೂರು ನಿವಾಸಿ ವಾರಿಜಾ(79) ಎಂದು ಗುರುತಿಸಲಾಗಿದೆ.
ಇವರೊಂದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಗ ಸತ್ಯನಾರಾಯಣ, ಸೊಸೆ ಶೈಲಜಾ ಹಾಗೂ ಮೊಮ್ಮಗಳು ಸೃಷ್ಠಿ ಎಂಬವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾರಿಜಾ ಅವರ ಕಣ್ಣಿನ ಸಮಸ್ಯೆಗೆ ಸಂಬಂಧಿಸಿ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದು ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಎದುರಿ ನಿಂದ ಬಂದ ಕಾರು ಢಿಕ್ಕಿ ಹೊಡೆಯಿತು ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಅಪಘಾತಕ್ಕೀಡಾದ ವಾಹನಗಳು ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಹಾಗೂ ಟೆಂಪೊಗೂ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಅಪಘಾತದಿಂದ ರಿಕ್ಷಾ ಪಲ್ಟಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ವಾರಿಜಾ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಉಳಿದ ವಾಹನಗಳಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿ ದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.